ಇಸ್ಲಮಾಬಾದ್: ಪಂಬಾಬಿನ ಭಾರತೀಯ ವಾಯುಪಡೆಯ ಮೇಲೆ ನಡೆದ ಭಯೋತ್ಪಾದನಾ ದಾಳಿಯ ದಾಳಿಕೋರರು ಪಾಕಿಸ್ತಾನಿಗಳಾಗಿದ್ದಲ್ಲಿ, ಪಾಕಿಸ್ತಾನ ಕೂಡಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಕಿಸ್ತಾನದ ಮುಂಚೂಣಿ ಪತ್ರಿಕೆ ಡಾನ್ ಸೋಮವಾರ ಹೇಳಿದೆ.
"ಈ ದಾಳಿಯಲ್ಲಿ ಪಾಕಿಸ್ತಾನಿ ನಾಗರಿಕರು ಭಾಗಿಯಾಗಿದಲ್ಲಿ, ಈ ವಿಷಯವನ್ನು ಪಾಕಿಸ್ತಾನದ ಅಧಿಕಾರಿಗಳ ಜೊತೆಗೆ ಆದಷ್ಟು ಬೇಗ ಹಂಚಿಕೊಳ್ಳಬೇಕು" ಎಂದು ಡಾನ್ ಸಂಪಾದಕೀಯದಲ್ಲಿ ಹೇಳಿದೆ.
ನಂತರ ಇದಕ್ಕೆ ಇಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೂಡ ಪತ್ರಿಕೆ ತಿಳಿಸಿದೆ.
"ಭಯೋತ್ಪಾದಕರ ರಾಜಕೀಯ ಆಂಕಾಕ್ಷೆಗಳನ್ನು ಹಾಳುಗೆಡವಲು ಎರಡು ಸರ್ಕಾರಗಳು ಸಹಭಾಗಿತ್ವದ ನಡೆಯ ಅಗತ್ಯವಿದೆ" ಎಂದು ಕೂಡ ಸಂಪಾದಕೀಯ ತಿಳಿಸಿದೆ.
ನರೇಂದ್ರ ಮೋದಿ ಅವರು ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಶನಿವಾರ ಪಾಕಿಸ್ತಾನದ ಉಗ್ರಗಾಮಿಗಳು ಎಂದು ನಂಬಲಾಗಿರುವ ಆರು ಜನ ಉಗ್ರರು ಪಂಜಾಬಿನಲ್ಲಿ ದಾಳಿ ನಡೆಸಿದ್ದರು.
ಈ ದಾಳಿಯನ್ನು ಖಂಡಿಸಿರುವ ಪಾಕಿಸ್ತಾನದ ಕ್ರಮವನ್ನು ಶ್ಲಾಘಿಸಿರುವ ಡಾನ್ ಪತ್ರಿಕೆ ಇನ್ನೂ ಬಹಳಷ್ಟು ಸವಾಲುಗಳನ್ನು ಎದುರಿಸಬೇಕಿದೆ ಎಂದಿದೆ.
"ಅಥವಾ ಪಾಕಿಸ್ತಾನಿ ಪ್ರಜೆಗಳು ಇದರಲ್ಲಿ ಭಾಗಿಯಾಗಿಲ್ಲ ಎಂದರೆ ಈ ವಿಷಯವನ್ನು ಕೂಡ ಭಾರತೀಯ ಸಾರ್ವಜನಿಕರ ಜೊತೆಗೆ ಹಂಚಿಕೊಳ್ಳಬೇಕು" ಎಂದು ಕೂಡ ಪತ್ರಿಕೆ ತಿಳಿಸಿದೆ.