ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಮಸಿ ಎರಚಿದ ಪ್ರಕರಣದಲ್ಲೀಗ ಹೊಸ ತಿರುವುಗಳು ಕಾಣಿಸಿಕೊಂಡಿವೆ. ಆದಾಗ್ಯೂ, ಸಿಎಂ ಕೇಜ್ರಿವಾಲ್ ಅವರಿಗೆ ಸರಿಯಾದ ಭದ್ರತೆ ನೀಡಿಲ್ಲ ಎಂಬ ಆರೋಪವನ್ನು ದೆಹಲಿ ಪೊಲೀಸರು ತಳ್ಳಿ ಹಾಕಿದ್ದಾರೆ.
ಸುದ್ದಿ ಮಾಧ್ಯಮವೊಂದರ ಪ್ರಕಾರ, ಜನವರಿ 17 ರಂದು ಛಟ್ರಾಸಲ್ ನಲ್ಲಿ ಕೇಜ್ರಿವಾಲ್ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿರುವಾಗ ಅವರ ರಕ್ಷಣೆಗಾಗಿ ನಿಯೋಜಿಸಿದ್ದ ಪೊಲೀಸ್ ಅಧಿಕಾರಿಯನ್ನು ವೇದಿಕೆಯಿಂದ ಕೆಳಗಿಳಿಯುವಂತೆ ಹೇಳಲಾಗಿದೆ.
ಈ ಬಗ್ಗೆ ಪೊಲೀಸ್ ಅಧಿಕಾರಿಯನ್ನು ಕೇಳಿದಾಗ ಸಿಎಂ ಅವರ ಪಿಎ ಅವರು ಯುನಿಫಾರ್ಮ್ ಧರಿಸಿರುವ ಯಾರೊಬ್ಬರೂ ವೇದಿಕೆಯ ಮೇಲೆ ಬೇಡ. ಎಲ್ಲರೂ ಕೆಳಗಿಳಿಯಿರಿ ಎಂದು ಆದೇಶಿಸಿ ವೇದಿಕೆಯಿಂದ ಕೆಳಗಿಳಿಸಿದ್ದರು ಎಂದು ಹೇಳಿದ್ದಾರೆ.
ಇಂಥಾ ಅನುಭವಗಳು ಇದೇ ಮೊದಲೇನಲ್ಲ. ಹಲವಾರು ಕಾರ್ಯಕ್ರಮಗಳಲ್ಲಿ ಕೇಜ್ರಿವಾಲ್ ರಕ್ಷಣೆಗೆ ನಿಂತಿದ್ದ ಪೊಲೀಸರನ್ನು ವೇದಿಕೆಯನ್ನೇರಲು ಬಿಡಲೇ ಇಲ್ಲ. ಅಷ್ಟೇ ಅಲ್ಲದೆ ಕೇಜ್ರಿವಾಲ್ ಅವರು ಭದ್ರತಾ ಅಧಿಕಾರಿಗಳಿಲ್ಲದೆ, ಲಾಗ್ ಬುಕ್ ನಲ್ಲಿ ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದನ್ನು ದಾಖಲಿಸದೆ ಹೊರಗೆ ಹೋಗಿದ್ದೂ ಉಂಟು ಎಂದು ಹೇಳಲಾಗುತ್ತಿದೆ.