ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಕುರಿತಂತೆ ಈ ಹಿಂದೆ ಬಿಡುಗಡೆಯಾಗಿದ್ದ ದಾಖಲೆಗಳು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ನೇತಾಜಿ ಕುರಿತ ರಹಸ್ಯಗಳು ಮಹಾತ್ಮ ಗಾಂಧೀಜಿಗೆ ತಿಳಿದಿತ್ತೇ ಎನ್ನುವ ಅನುಮಾನಗಳನ್ನು ಹುಟ್ಟುಹಾಕುತ್ತಿದೆ.
1945ರ ಆಗಸ್ಟ್ 18ರಂದು ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ಸಾವನ್ನಪ್ಪಿದ್ದರು ಎಂದು ಹೇಳಲಾಗಿತ್ತು. ಆದರೆ, ಈ ಘಟನೆಯ ಕೆಲ ದಿನಗಳ ಬಳಿಕ ಬಹಿರಂಗ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ್ದ ಮಹಾತ್ಮ ಗಾಂಧೀಜಿ ಅವರು, ‘ನೇತಾಜಿ ಬದುಕಿದ್ದಾರೆ ಅಂತ ನನಗೆನಿಸುತ್ತದೆ’ ಎಂದು ಹೇಳಿದ್ದರು. ಇಷ್ಟೇ ಅಲ್ಲ ನೇತಾಜಿ ಸಾವಿನ ಬಗ್ಗೆ ಹಲವು ಪ್ರಶ್ನೆಗಳಿವೆ. ಆದ್ದರಿಂದ ಅವರ ಶ್ರಾದ್ಧ ಆಚರಿಸಬೇಡಿ ಎಂದು ಬೋಸ್ ಕುಟುಂಬದವರಿಗೆ ಮನವಿ ಮಾಡಿದ್ದರು ಎಂಬ ಮಾಹಿತಿ 1946ರ ಕಡತವೊಂದರಲ್ಲಿದೆ ಎಂದು ತಿಳಿದುಬಂದಿದೆ. ಗಾಂಧೀಜಿ ತಮ್ಮ ಈ ಭಾವನೆಗಳನ್ನು ‘ಅಂತರಾತ್ಮದ ದನಿ’ ಎಂದೂ ಕರೆದಿದ್ದಾರೆ.
ಕುಟುಂಬದವರ ಸತತ ಹೋರಾಟ
ನೇತಾಜಿ ಸಾವಿನ ರಹಸ್ಯ ದೇಶಕ್ಕೆ ತಿಳಿಯಬೇಕು ಎಂಬ ನಿಟ್ಟಿನಲ್ಲಿ ಹಲವು ಸಂಘಟನೆಗಳು ಹೋರಾಟ ನಡೆಸುತ್ತಿವೆಯಾದರೂ ಸುಬಾಷ್ ಚಂದ್ರ ಬೋಸ್ ಕುಟುಂಬದ ಸದಸ್ಯರು ದೊಡ್ಡಮಟ್ಟದಲ್ಲಿ ದನಿ ಎತ್ತಿದ್ದಾರೆ.
ಸುಭಾಷ್ಚಂದ್ರ ಬೋಸ್ - ಫೌಂಡೇಷನ್ ಸದಸ್ಯರಾಗಿರುವ ನೇತಾಜಿಯವರ ಸಹೋದರ ಶರತ್ಚಂದ್ರ ಬೋಸ್ ಮೊಮ್ಮಗ ಚಂದ್ರಕುಮಾರ್ ಬೋಸ್ ಈ ವಿಷಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನೂ ಭೇಟಿ ಮಾಡಿ ಚರ್ಚಿಸಿದ್ದರು. ಪಶ್ಚಿಮ ಬಂಗಾಳ ಸರ್ಕಾರ ರಹಸ್ಯ ಕಡತಗಳನ್ನು ಬಿಡುಗಡೆಗೊಳಿಸಿದ ಬಳಿಕ ಕೇಂದ್ರ ಸರ್ಕಾರ ಕೂಡ ನೇತಾಜಿ ಸಾವಿನ ರಹಸ್ಯಗಳನ್ನು ಬಹಿರಂಗಗೊಳಿಸಬೇಕು ಎಂಬ ಆಗ್ರಹವನ್ನು ನೇತಾಜಿ ಕುಟುಂಬವರ್ಗದವರು ಮಾಡಿದ್ದರು. ಕುಟುಂಬದ ಸದಸ್ಯರು 2015ರ ಅಕ್ಟೋಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ರಹಸ್ಯ ಕಡತಗಳ ಬಿಡುಗಡೆಗೆ ಮನವಿ ಮಾಡಿದ್ದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರಧಾನಿ ಮೋದಿ ಸೂಕ್ತ ಕ್ರಮದ ಆಶ್ವಾಸನೆ ನೀಡಿದ್ದರು. ಅದರಂತೆ, ಇಂದು (ಜ.23) ನೇತಾಜಿ ಸಾವಿನ ಕುರಿತಾದ ಕಡತಗಳನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸುತ್ತಿದೆ. ನಿಜಕ್ಕೂ ಬೋಸ್ ವಿಮಾನಾಪಘಾತದಲ್ಲಿ ಮೃತಪಟ್ಟರೆ, ಇಲ್ಲ ಎಂದಾದಲ್ಲಿ ಅವರು ಎಲ್ಲಿದ್ದರು? ಎಷ್ಟು ದಿನಗಳ ಕಾಲ ಬದುಕಿದ್ದರು? ಎಂಬೆಲ್ಲ ಪ್ರಶ್ನೆಗಳಿಗೆ ಈ ಕಡತಗಳಿಂದ ಮಾಹಿತಿ ಸಿಗುವ ಸಾಧ್ಯತೆಗಳಿವೆ. 2012ರಲ್ಲಿ ಆಗಿನ ಕೇಂದ್ರ ಸರ್ಕಾರ ‘ದೇಶದ ಸುರಕ್ಷೆ’ಯ ಕಾರಣ ಹೇಳಿ ನೇತಾಜಿ ಸಾವಿನ ಕುರಿತಾದ ರಹಸ್ಯ ಕಡತಗಳನ್ನು ಬಹಿರಂಗಗೊಳಿಸಲು ನಿರಾಕರಿಸಿತ್ತು.