ಕಾರ್ಯಕ್ರಮ ಉದ್ಘಾಟಿಸುತ್ತಿರುವ ಜಯಾ ಬಚ್ಚನ್
ಬೆಂಗಳೂರು:ಎಂಟನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಬಾಲಿವುಡ್ ಹಿರಿಯ ನಟಿ ಜಯಾ ಬಚ್ಚನ್ ಅವರು ಗುರುವಾರ ಚಾಲನೆ ನೀಡಿದರು.
ಇಂದು ಸಂಜೆ ವಿಧಾನಸೌಧದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಚಿತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಫೆ. 4ರವರೆಗೆ ನಡೆಯುವ ಉತ್ಸವದಲ್ಲಿ 45 ದೇಶಗಳ 200 ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಒಟ್ಟು 15 ವಿಚಾರ ಸಂಕಿರಣ ಮತ್ತು ಕಾರ್ಯಾಗಾರ ಆಯೋಜಿಸಲಾಗಿದೆ. ರಸೂಲ್ ಫೂಕುಟ್ಟಿ, ಅನಿಲ್ ಮೆಹ್ತಾ, ಸುಹಾಸಿನಿ ಮಣಿರತ್ನಂ ಮತ್ತಿತರರು ಪಾಲ್ಗೊಂಡು ಅನುಭವ ಹಂಚಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಕನ್ನಡದ ‘ತಿಥಿ’ ಸಿನಿಮಾ ಉದ್ಘಾಟನಾ ಚಿತ್ರವಾಗಿ ಪ್ರದರ್ಶನಗೊಳ್ಳುತ್ತಿದೆ.
ಒಟ್ಟು ನಾಲ್ಕು ಸಾವಿರ ಪ್ರತಿನಿಧಿಗಳು ಸಿನಿಮೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹಿಂದೆಲ್ಲ ಲಿಡೊ ಮಾಲ್, ಫನ್ ಸಿನಿಮಾಸ್, ವಾರ್ತಾ ಭವನ ಮತ್ತು ಚಲನಚಿತ್ರ ಅಕಾಡೆಮಿಯ ‘ಬಾದಾಮಿ ಹೌಸ್’ನಲ್ಲಿ ಪ್ರದರ್ಶನಗಳು ಇರುತ್ತಿದ್ದವು.
ಆದರೆ ಈ ಬಾರಿ ರಾಜಾಜಿನಗರದ ಒರಾಯನ್ ಮಾಲ್ನ 11 ಪರದೆಗಳಲ್ಲಿ ಪ್ರದರ್ಶನವಿರುವುದು ವಿಶೇಷ. ಒರಾಯನ್ ಮಾಲ್ನಲ್ಲಿ ಸಿನಿಮೋತ್ಸವ ಸಂಘಟಿಸಿದ್ದರಿಂದ ವಾಹನ ನಿಲುಗಡೆ ಶುಲ್ಕ ಕುರಿತು ಅಸಮಾಧಾನದ ದನಿ ಕೇಳಿಬಂದಿತ್ತು. ಆದರೆ ಅದಕ್ಕೆ ಈಗ ಪರಿಹಾರ ಕಲ್ಪಿಸಲಾಗಿದ್ದು, ದಿನವಿಡೀ ಕಾರುಗಳ ಪಾರ್ಕಿಂಗ್ಗೆ 60, ದ್ವಿಚಕ್ರವಾಹನಗಳ ನಿಲುಗಡೆಗೆ 30 ಪ್ರವೇಶ ಶುಲ್ಕ ನಿಗದಿಗೊಳಿಸಲಾಗಿದೆ.
ಶಬ್ದಗ್ರಹಣ, ನಿರ್ದೇಶನ, ಸಂಭಾಷಣೆ ಇತ್ಯಾದಿ ವಿಷಯಗಳ ಬಗ್ಗೆ ವಿಚಾರ ಸಂಕಿರಣ ಸಂಘಟಿಸಲಾಗಿದೆ. ಕಳೆದ ಬಾರಿ ಸ್ವಾತಂತ್ರ್ಯ ಉದ್ಯಾನದಲ್ಲಿ ಬಯಲು ಸಿನಿಮೋತ್ಸವ ನಡೆಸಲಾಗಿತ್ತು. ಆದರೆ, ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ ಕಾರಣ ಈ ಸಲ ಅದನ್ನು ಕೈಬಿಡಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos