ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ಇತರೆ ಬೇಡಿಕೆಗಳಿಗೆ ಆಗ್ರಹಿಸಿ ನಿನ್ನೆಯಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಒಬ್ಬೊಬ್ಬರಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಶಾಂತಿನಗರ ಡಿಪೋದಿಂದ ಐದು ಬಿಎಂಟಿಸಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ.
ನೌಕರರ ಮುಷ್ಕರಕ್ಕೆ ಜಗ್ಗದ ರಾಜ್ಯ ಸರ್ಕಾರ ಇದೀಗ ತರಬೇತಿ ನಿರತ ಚಾಲಕರು ಹಾಗೂ ನಿರ್ವಾಹಕರನ್ನು ಬಳಸಿಕೊಂಡು ಪೊಲೀಸ್ ಬಿಗಿ ಭದ್ರತೆಯೊಂದಿಗೆ ಕೆಲವು ಬಸ್ ಗಳ ಸಂಚಾರ ಆರಂಭಿಸಿದೆ.
ಶಾಂತಿನಗರ ಬಸ್ ಡಿಪೋದಿಂದ ಒಟ್ಟು ನಾಲ್ಕು ಬಸ್ ಗಳ ಸಂಚಾರ ಆರಂಭಗೊಂಡಿದ್ದು, ಆ ಪೈಕಿ ಒಂದು ಶಾಂತಿನಗರದಿಂದ ಮೆಜೆಸ್ಟಿಕ್ ಮಾರ್ಗದಲ್ಲಿ 1, ಶಾಂತಿನಗರದಿಂದ ಶಿವಾಜಿನಗರಕ್ಕೆ 1, ಶಾಂತಿನಗರದಿಂದ ಜಯನಗರಕ್ಕೆ 1 ಹಾಗೂ ಶಾಂತಿನಗರದಿಂದ ಮೈಸೂರು ರಸ್ತೆಯ ಸ್ಯಾಟ್ ಲೈಟ್ ಬಸ್ ನಿಲ್ದಾಣಕ್ಕೆ ಸಂಚರಿಸುತ್ತಿವೆ.
ಇನ್ನು ಕೆಎಸ್ಆರ್ ಟಿಸಿ ಸಹ ನಗರದ ವಿವಿಧೆಡೆ ಸಂಚಾರ ಆರಂಭಿಸಿದ್ದು, ಸ್ಯಾಟ್ ಲೈಟ್ ಬಸ್ ನಿಲ್ದಾಣದಿಂದ 8 ಕೆಎಸ್ಆರ್ ಟಿಸಿ ಬಸ್ ಗಳು ಸಂಚಾರ ಆರಂಭಿಸಿವೆ.
ಎರಡನೇ ದಿನಕ್ಕೆ ಕಾಲಿಟ್ಟಿದ್ದ ಬಸ್ ಮುಷ್ಕರವನ್ನು ಶತಾಯಗತಾಯ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದ್ದ ರಾಜ್ಯ ಸರ್ಕಾರ, ಸಂಜೆಯೊಳಗೆ ಕೆಲಸಕ್ಕೆ ವಾಪಸಾಗದಿದ್ದರೆ ಮುಷ್ಕರ ನಿರತ ನೌಕರರನ್ನು ಕೆಲಸದಿಂದಲೇ ವಜಾಗೊಳಿಸುವುದಾಗಿ ಎಚ್ಚರಿಕೆ ನೀಡಿತ್ತು.
ಚಿಕ್ಕಮಗಳೂರು ಡಿಪೋದ ಐವರು ಸಿಬ್ಬಂದಿ ಸೇವೆಯಿಂದ ವಜಾ
ಚಿಕ್ಕಮಗಳೂರು ಡಿಪೋಗೆ ಸೇರಿದ ಕೆಎಸ್ಆರ್ ಟಿಸಿಯ ಐವರು ಸಿಬ್ಬಂದಿಯನ್ನು ಮಂಗಳವಾರ ಸೇವೆಯಿಂದ ವಜಾಗೊಳಿಸಲಾಗಿದೆ.
ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸುರೇಶ್, ರೇವಣ್ಣಪ್ಪ, ಪೆದ್ದಣ್ಣ, ಜಗದೀಶ್ ಸೇರಿದಂತೆ ಐವರನ್ನು ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos