ಬಿ ಎಸ್ ಪಿ ಅಧ್ಯಕ್ಷೆ ಮಾಯಾವತಿ
ಲಖನೌ: ಬಹುಜನ ಸಮಾಜ ಪಕ್ಷಕ್ಕೆ ಆಘಾತವಾಗುವ ನಡೆಯೊಂದರಲ್ಲಿ ಪಕ್ಷದ ಹಿರಿಯ ನಾಯಕ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್ ಕೆ ಚೌಧರಿ ಪಕ್ಷ ತೊರೆದಿರುವುದಾಗಿ ಗುರುವಾರ ಘೋಷಿಸಿದ್ದಾರೆ.
ಬಿ ಎಸ್ ಪಿ ತಂಡದ ಪ್ರಮುಖ ಸದಸ್ಯ ಎನ್ನಲಾಗಿದ್ದ ಚೌಧರಿ, ಸಂಸ್ಥಾಪಕ ಕಾನ್ಷಿರಾಮ್ ನಂತರ ಪ್ರಭಾವಿ ಮುಖಂಡ ಎಂದೇ ನಂಬಲಾಗಿತ್ತು ಮತ್ತು ಬಿ ಎಸ್ ಪಿ ಪಕ್ಷಕ್ಕೆ ದಲಿತರ ಐಕಾನ್ ಕೂಡ ಆಗಿದ್ದರು.
ಬಿ ಎಸ್ ಪಿ ಪಕ್ಷವನ್ನು ತಮ್ಮ ವೈಯಕ್ತಿಕ ಕೋಟೆಯಾಗಿ ಅಧ್ಯಕ್ಷೆ ಮಾಯಾವತಿ ಬದಲಾಯಿಸಿದ್ದಾರೆ ಎಂದು ದೂರಿರುವ ಚೌಧರಿ ಪಕ್ಷವನ್ನು ಆಳುತ್ತಿರುವುದು ಈಗ ಹಣವಷ್ಟೇ ಎಂದು ಕೂಡ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಲೇವಾದೇವಿಗಾರರು, ರಿಯಲ್ ಎಸ್ಟೇಟ್ ಮಾರಾಟಗಾರರು ಮತ್ತು ರಿಯಲ್ ಎಸ್ಟೇಟ್ ಮಾಫಿಯಾ ನಡೆಸುವವರು, ಒಂದು ಕಾಲದಲ್ಲಿ ದಲಿತ ಪರವಾಗಿದ್ದ ಪಕ್ಷಕ್ಕೆ ಕಾಲಿಟ್ಟಿದ್ದಾರೆ ಎಂದು ಕೂಡ ಅವರು ಆರೋಪಿಸಿದ್ದಾರೆ. ಅಲ್ಲದೆ ಮಾಯಾವತಿ ತಮ್ಮ ಕುಟುಂಬಕ್ಕೋಸ್ಕರ ಹಣ ಸಂಗ್ರಹಿಸಿದ್ದಾರೆ ಎಂದು ಕೂಡ ದೂರಿದ್ದಾರೆ. "ಪಕ್ಷದಿಂದ ಚುನಾವಣೆಗೆ ನಿಲ್ಲಲು ಅಭ್ಯರ್ಥಿಗಳಿಂದ ಅವರು ಹಣ ಪಡೆಯುತ್ತಿದ್ದಾರೆ ಮತ್ತು ಪಕ್ಷ ಈಗ ರಿಯಲ್ ಎಸ್ಟೇಟ್ ಸಂಸ್ಥೆಯಂತಾಗಿದೆ" ಎಂದು ಕೂಡ ಅವರು ದೂರಿದ್ದಾರೆ.
ಜೂನ್ 22 ರಂದು ಉತ್ತರ ಪ್ರದೇಶದ ವಿಧಾನ ಸಭೆಯ ವಿರೋಧಪಕ್ಷದ ನಾಯಕರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ ಅವರು ಜೂನ್ 22 ರಂದು ಪಕ್ಷ ತೊರೆದ ನಂತರ ಇದು ಎರಡನೇ ದೊಡ್ಡ ಹೊಡೆತವಾಗಿ ಬಿ ಎಸ್ ಪಿ ಪಕ್ಷಕ್ಕೆ ಪರಿಣಮಿಸಿದೆ. ಈ ಹಿಂದೆ 2001 ರಲ್ಲೂ ಪಕ್ಷ ತೊರೆದಿದ್ದ ಚೌಧರಿ ಮತ್ತೆ ಪಕ್ಷ ಸೇರಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos