ಪ್ರತಿಭಟನಾನಿರತ ರೈತರು ಹಾಗೂ ಟ್ರಾಫಿಕ್ ಜಾಮ್ ಆದ ದೃಶ್ಯ
ಬೆಂಗಳೂರು: ಶಾಶ್ವತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಚಿಕ್ಕಬಳ್ಳಾಪುರ ಹಾಗೂ ಕೋಲಾರದಿಂದ ಸಾವಿರಾರು ರೈತರು ಬೃಹತ್ ಟ್ರ್ಯಾಕ್ಟರ್ ರ್ಯಾಲಿಯೊಂದಿಗೆ ವಿಧಾಸೌಧದತ್ತ ಬರುತ್ತಿದ್ದ ಸಾವಿರಾರು ರೈತರನ್ನು ಪೊಲೀಸರು ಮೇಖ್ರಿ ಸರ್ಕಲ್ ಬಳಿ ತಡೆದಿದ್ದು, ರೊಚ್ಚಿಗೆದ್ದ ರೈತರು ರಸ್ತೆಯಲ್ಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಏರ್ ಫೋರ್ಟ್ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಇದಕ್ಕೂ ಮುನ್ನ ದೇವನಹಳ್ಳಿಯ ರಾಣಿಕ್ರಾಸ್ ಬಳಿಯೇ ಬ್ಯಾರಿಕೇಡ್ ಅನ್ನು ಹಾಕಿ ರೈತರನ್ನು ತಡೆಯಲು ಪೊಲೀಸರು ಯತ್ನಿಸಿದರು. ಆದರೆ ಬ್ಯಾರಿಕೇಟ್ ಮುರಿದು ನೂರಾರು ಟ್ರ್ಯಾಕ್ಟರ್ ಗಳ ಮೂಲಕ ರೈತರು ಮೇಖ್ರಿ ಸರ್ಕಲ್ ಗೆ ಆಗಮಿಸಿದ್ದು, ಈಗ ವಿಧಾಸೌಧ ಮುತ್ತಿಗೆ ಹಾಕಲು ಯತ್ನಿಸುತ್ತಿದ್ದಾರೆ. ಆದರೆ ಪೊಲೀಸರು ಅವರನ್ನು ತಡೆದಿದ್ದರಿಂದ ರೊಚ್ಚಿಗೆದ್ದ ರೈತರು ಬಿಎಂಟಿಸಿ ಬಸ್ ಗಳ ಮೇಲೆ ಕಲ್ಲು ತೂರಿದ ಘಟನೆಯೂ ನಡೆಯಿತು. ಪ್ರತಿಭಟನೆಯಿಂದಾಗಿ ಮೇಖ್ರಿ ಸರ್ಕಲ್, ಮೆಜೆಸ್ಟಿಕ್ ಸುತ್ತಮುತ್ತ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಂತಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಚಿವರು ಭೇಟಿ ನೀಡಿದ್ದಾರೆ.
ಈ ವೇಳೆ ಮಾತನಾಡಿದ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು, ರೈತರ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಟ್ರ್ಯಾಕ್ಟರ್, ಲಾರಿ ಸಂಚಾರಕ್ಕೆ ಪೊಲೀಸರು ನಿಷೇಧ ಹೇರಿದ್ದರು. ಆದರೆ ಕುಡಿಯಲು, ಬೆಳೆಗೆ ನೀರಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಇಂತಹ ನಿಷೇಧದ ಕ್ರಮ ಕೈಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟ್ರ್ಯಾಕ್ಟರ್, ಲಾರಿ ಸಂಚಾರ ನಿಷೇಧಿಸುವ ಪೊಲೀಸ್ ಕಮಿಷನರ್, ಮುಂದಿನ ದಿನಗಳಲ್ಲಿ ರೈತರು ಸ್ನಾನ ಮಾಡಿಲ್ಲ, ಫೇರ್ ಅಂಡ್ ಲವ್ಲಿ ಹಚ್ಚಿಕೊಂಡಿಲ್ಲ ಎಂದು ಸಬೂಬು ಹೇಳಿ ನಮ್ಮ ಪ್ರತಿಭಟನೆ ತಡೆಯಲೂಬಹುದು ಎಂದು ಕೋಡಿಹಳ್ಳಿ ವ್ಯಂಗ್ಯವಾಡಿದರು. ಏನೇ ಆದರೂ ನಾವು ಟ್ರ್ಯಾಕ್ಟರ್ ಮೂಲಕ ರ್ಯಾಲಿ ನಡೆಸಿ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸುವ ಹೋರಾಟ ಮುಂದುವರಿಸುವುದಾಗಿ ಕೋಡಿಹಳ್ಳಿ ಹೇಳಿದರು. ಪ್ರತಿಭಟನೆಯಿಂದಾಗಿ ಕೋಲಾರ, ತುಮಕೂರು ರಸ್ತೆ ಬಂದ್ ಆಗಿದೆ. ಕೆಆರ್ ಪುರಂ ಬಳಿ ರಸ್ತೆ ತಡೆದ ರೈತರು ಪ್ರತಿಭಟನೆ ನಡೆಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos