ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ಮೇಲೆ ಪ್ರಭಾವ ಬೀರಿದ ಆರೋಪದ ಮೇಲೆ ಜವಳಿ ಸಚಿವ ಬಾಬೂರಾವ್ ಚಿಂಚನಸೂರ್ ಅವರು ವಿರುದ್ಧ ಮಹಿಳಾ ಆಯೋಗ ಹಾಗೂ ಪೊಲೀಸರಿಗೆ ದೂರು ನೀಡಲಾಗಿದೆ.
ಅಂಜನಾ ಶಾಂತವೀರ ಎಂಬುವವರು ಕೆಲವು ತಿಂಗಳ ಹಿಂದೆ ಸಚಿವ ಚಿಂಚನಸೂರ್ ವಿರುದ್ಧ ಚೆಕ್ ಬೌನ್ಸ್ ಪ್ರಕರಣದ ದಾಖಲಿಸಿದ್ದರು. ಈ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಇನ್ಸ್ ಪೆಕ್ಟರ್ ಅನಂದ್ ಕಬೂರ್ ಅವರು ತನಿಖೆ ಮುಗಿಯುವ ಮುನ್ನವೇ ಸಚಿವರಿಗೆ ಮಾಹಿತಿ ನೀಡಿದ ಆರೋಪ ಎದುರಿಸುತ್ತಿದ್ದು, ಈ ಸಂಬಂಧ ಅಂಜನಾ ಅವರು ಸಚಿವರ ಹಾಗೂ ತನಿಖಾಧಿಕಾರಿ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಅನಂದ್ ಕಬೂರ್ ಅವರು ತಮ್ಮ ತಮ್ಮನಿಗೆ ಸರ್ಕಾರಿ ವೈದ್ಯನ ಪೋಸ್ಟ್ ಗಿಟ್ಟಿಸಲು ಡೀಲ್ಗೆ ಇಳಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಈ ಸಂಬಂಧ ಸಚಿವರು ಹಾಗೂ ತನಿಖಾಧಿಕಾರಿ ನಡೆಸಿರುವ ಡೀಲ್ ಸಂಭಾಷಣೆಯನ್ನು ದೂರುದಾರೆ ಅಂಜನಾ ಅವರು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದಾರೆ. ಆಡಿಯೋದಲ್ಲಿ ತನಿಖಾಧಿಕಾರಿ ದೂರುದಾರ ಮಹಿಳೆಯನ್ನೆ ಕೆಟ್ಟ ಹೆಂಗಸು ಅಂತ ಬೈದಿದ್ದಾರೆ.
ಸಚಿವ ಬಾಬುರಾವ್ ಚಿಂಚನಸೂರ್ ಹಾಗೂ ಅಂಜನಾ ಶಾಂತವೀರ ಅವರಿಗೆ ಹಲವು ವರ್ಷಗಳ ಪರಿಚಯವಿದ್ದು, ಇವರಿಬ್ಬರ ಮಧ್ಯೆ ಸಾಕಷ್ಟು ಬಾರಿ ಕೋಟಿಗಟ್ಟಲೇ ಹಣಕಾಸು ವ್ಯವಹಾರ ನಡೆದಿತ್ತು. 2011ರ ಜನವರಿ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ 11.88 ಕೋಟಿ ರೂಪಾಯಿ ಸಾಲವನ್ನು ಅಂಜನಾ ಬಾನುರಾವ್ ಚಿಂಚನಸೂರ್ಗೆ ನೀಡಿದ್ದರು. ಬಳಿಕ ಅಂಜನಾ ಅವರು ತಮ್ಮ ಮೂರು ಕಾರ್ಖಾನೆಗಳ ನವೀಕರಣಕ್ಕೆ ನೀಡಿರುವ ಸಾಲವನ್ನು ಮರು ಪಾವತಿಸಲು ಕೇಳಿಕೊಂಡಿದ್ದರು. ಈ ವೇಳೆ ಮರು ಪಾವತಿಗೆ ಚಿಂಚನಸೂರ್ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಅಂಜನಾ ಅವರು 2015ರ ಜುಲೈ ತಿಂಗಳಿನಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ದೂರು ದಾಖಲಿಸಿದ್ದರು. ನಂತರ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು.