ಪ್ರಧಾನ ಸುದ್ದಿ

ನೋಟು ಹಿಂಪಡೆತ ಅವ್ಯವಸ್ಥೆ ವಿರೋಧಿಸಿ ಸಂಸತ್ತಿಗೆ ಮುತ್ತಿಗೆ ಹಾಕಲಿರುವ ಎಎಪಿ

Guruprasad Narayana
ನವದೆಹಲಿ: ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂದಕ್ಕೆ ಪಡೆದಿರುವ ಕೇಂದ್ರ ಸರ್ಕಾರದ ನಿರ್ಧಾರ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಸಹಾಯ ಮಾಡಲು ತೆಗೆದುಕೊಂಡಿರುವ ನಡೆ, ಇದರಿಂದ ಕಪ್ಪು ಹಣ ಹಿಂದಿರುಗುವುದಿಲ್ಲ ಎಂದು ಆರೋಪಿಸಿ ಮಂಗಳವಾರ ಸಂಸತ್ತಿಗೆ ಮುತ್ತಿಗೆ ಹಾಕುವುದಾಗಿ ಆಮ್ ಆದ್ಮಿ ಪಕ್ಷ ಘೋಷಿಸಿದೆ. 
"ನಾವು ಸಂಸತ್ ಭವನಕ್ಕೆ ನಡೆದು, ಉಪಮುಖ್ಯಮಂತ್ರಿ ಮನೀಶ್ ಸಿಸೋಧಿಯಾ ನೇತೃತ್ವದಲ್ಲಿ ಮುತ್ತಿಗೆ ಹಾಕಲಿದ್ದೇವೆ" ಎಂದು ಎಎಪಿ ಪಕ್ಷದ ಮುಖಂಡರಾದ ಆಶಿಶ್ ಕೇತನ್ ಮತ್ತು ದಿಲೀಪ್ ಪಾಂಡೆ ಮಾಧ್ಯಮಗಳಿಗೆ ಹೇಳಿದ್ದಾರೆ. 
ನೋಟು ಹಿಂಪಡೆತದ ನಿರ್ಧಾರದ ವಿರುದ್ಧ ಹೋರಾಟ ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ನಮ್ಮ ಪ್ರಮುಖ ವಿಷಯಗಳಲ್ಲಿ ಒಂದು ಎಂದು ಕೂಡ ಎಎಪಿ ಹೇಳಿದೆ. 
ಡಿಸೆಂಬರ್ ೧ ರಿಂದ ಉತ್ತರಪ್ರದೇಶದ ಮೀರತ್, ಲಖನೌ ಮತ್ತು ವಾರಣಾಸಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ನಿರ್ಧಾರದ ವಿರುದ್ಧ ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ ಎಂದು ಕೂಡ ಪಕ್ಷ ತಿಳಿಸಿದೆ. 
"ಇದು ೮ ಲಕ್ಷ ಕೋಟಿ ಹಗರಣ. ಇದು ಕಪ್ಪು ಹಣ ಹಿಂಪಡೆಯುವುದಕ್ಕೆ ಮಾಡಿರುವುದಲ್ಲ ಬದಲಾಗಿ ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಸಹಾಯ ಮಾಡಲು ತೆಗೆದುಕೊಂಡಿರುವ ನಿರ್ಧಾರ. ಇದರ ಬಗ್ಗೆ ಕೇಜ್ರಿವಾಲ್ ಈಗಾಗಲೇ ವಿವರವಾಗಿ ತಿಳಿಸಿದ್ದಾರೆ" ಎಂದು ಕೇತನ್ ಹೇಳಿದ್ದಾರೆ. 
SCROLL FOR NEXT