ನವದೆಹಲಿ: ಕಾವೇರಿ ವಿಚಾರವಾಗಿ ಇನ್ನು ಮುಂದೆ ಕರ್ನಾಟಕದ ಪರ ವಾದ ಮಂಡಿಸುವುದಿಲ್ಲ ಎಂದು ಹೇಳಿದ್ದ ಫಾಲಿ ನಾರಿಮನ್ ಅವರ ಮನವೊಲಿಸುವಲ್ಲಿ ರಾಜ್ಯದ ಕಾನೂನು ತಂಡ ಯಶಸ್ವಿಯಾಗಿದ್ದು, ಮಂಗಳವಾರ ನಡೆಯಲಿರುವ ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ಕರ್ನಾಟಕ ಸರ್ಕಾರದ ಪರ ನಾರಿಮನ್ ಅವರೇ ವಾದ ಮಂಡಿಸಲಿದ್ದಾರೆ.
ಕಾವೇರಿ ವಿಚಾರವಾಗಿ ಸುಮಾರು 2 ದಶಕಗಳಿಂದಲೂ ನಾರಿಮನ್ ಅವರೇ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದು, ಪ್ರಕರಣದ ಎಲ್ಲ ಮಾಹಿತಿಗಳು ಅವರಿಗೆ ತಿಳಿದಿದೆ. ಇದೇ ಅಕ್ಟೋಬರ್ 18ರಂದು ಐತೀರ್ಪಿನ ವಿಚಾರಣೆ ಇದ್ದು, ಈ ಹಂತದಲ್ಲಿ ವಕೀಲರ ಬದಲಾವಣೆ ಕರ್ನಾಟಕಕ್ಕೆ ಮಾರಕವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿದ್ದವು. ಇನ್ನು ನಿನ್ನೆ ನಡೆದ ವಿಶೇಷ ಕಲಾಪದಲ್ಲಿಯೂ ನಾರಿಮನ್ ಅವರ ವಿರುದ್ಧ ಅಸಮಾಧಾನ ವ್ಯಕ್ತವಾದಾಗ ಅವರ ಬೆನ್ನಿಗೆ ಸ್ವತಃ ಸಿದ್ದರಾಮಯ್ಯ ಅವರು ನಿಂತು ಮಾತನಾಡಿದರು. ಅಲ್ಲದೆ ಅವರನ್ನೇ ಮುಂದಿನ ನ್ಯಾಯಾಲಯದ ಕಲಾಪಕ್ಕೆ ಬಳಸಿಕೊಳ್ಳುವ ಕುರಿತು ತೀರ್ಮಾನ ಕೈಗೊಂಡಿದ್ದರು. ಹೀಗಾಗಿ ರಾಜ್ಯ ಸರ್ಕಾರ ಕಾನೂನು ತಂಡವನ್ನು ದೆಹಲಿಗೆ ಕಳುಹಿಸಿ ಅಸಮಾಧಾನಗೊಂಡಿದ್ದ ನಾರಿಮನ್ ಅವರ ಮನವೊಲಿಸಲು ಸೂಚಿಸಿತ್ತು.
ಕಾನೂನು ತಂಡದಲ್ಲಿ ರಾಜ್ಯದ ನೀರಾವರಿ ಸಚಿವ ಎಂಬಿ ಪಾಟೀಲ್ ಕೂಡ ತೆರಳಿದ್ದರು. ದೆಹಲಿಯಲ್ಲಿರುವ ನಾರಿಮನ್ ನಿವಾಸಕ್ಕೆ ತೆರಳಿದ್ದ ಕರ್ನಾಟಕದ ತಂಡ ನಾರಿಮನ್ ಅವರನ್ನು ಓಲೈಸುವಲ್ಲಿ ಯಶಸ್ವಿಯಾಗಿದೆ. ಇಂದು ನಾರಿಮನ್ ನಿವಾಸಕ್ಕೆ ತೆರಳಿದ್ದ ಕಾನೂನು ತಂಡ ಪ್ರತಿಪಕ್ಷಗಳ ಟೀಕೆಗೆ ಬೇಸರ ಮಾಡಿಕೊಳ್ಳದಂತೆ ಮನವಿ ಮಾಡಿದೆ. ಇದಕ್ಕೆ ನಾರಿಮನ್ ಅವರೂ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ವಾದ ಮಂಡಿಸಲು ಒಪ್ಪಿಗೆ ಸೂಚಿಸಿದ್ದಾರೆ.
ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಕರ್ನಾಟಕ ಪಾಲಿಸದ ಹಿನ್ನಲೆಯಲ್ಲಿ ಅಸಮಾಧಾನಗೊಂಡಿದ್ದ ನಾರಿಮನ್ ಅವರು ಕರ್ನಾಟಕದ ಪರ ತಾವು ವಾದ ಮಂಡಿಸುವುದಿಲ್ಲ ಎಂದು ಹೇಳಿದ್ದರು. ಇದೇ ಕಾರಣಕ್ಕೆ ಕಳೆದ ಸೆಪ್ಟೆಂಬರ್ 30ರಂದು ನಡೆದ ವಿಚಾರಣೆಯಲ್ಲಿ ವಾದ ಮಂಡಿಸಲು ನಕಾರಾ ತೋರಿದ ನಾರಿಮನ್ ಅವರು, ಕೇವಲ ಸರ್ಕಾರ ನೀಡಿದ್ದ ಟಿಪ್ಪಣಿಯನ್ನು ಮಾತ್ರ ಸುಪ್ರೀಂ ಕೋರ್ಟ್ ಗೆ ನೀಡಿದ್ದರು.
ಇದಲ್ಲದೆ ಈ ಹಿಂದೆ ಕರ್ನಾಟಕದ ಕಲಾಪದಲ್ಲಿ ಪ್ರತಿಪಕ್ಷಗಳು ಫಾಲಿ ನಾರಿಮನ್ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದೂ ಕೂಡ ನಾರಿಮನ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ಹೇಳಲಾಗುತ್ತಿದೆ.