ಢಾಕಾ: ಬಾಂಗ್ಲಾದೇಶದ ಗಾಜಿಪುರ ನಗರದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಇಬ್ಬರು ಶಂಕಿತ ಉಗ್ರರನ್ನು ಶನಿವಾರ ಹತ್ಯೆ ಮಾಡಲಾಗಿದೆ.
ಇಬ್ಬರು ಹತ್ಯೆಯಾಗಿರುವುದನ್ನು ಧೃಢೀಕರಿಸಿರುವ ರ್ಯಾಪಿಡ್ ಆಕ್ಷನ್ ಬೆಟಾಲಿಯನ್ (ಆರ್ ಎ ಬಿ) ವಕ್ತಾರ ಮುಫ್ತಿ ಮಹಮೂದ್ ಖಾನ್, ಅವರ ಗುರುತುಗಳನ್ನು ಬಹಿರಂಗಪಡಿಸಿಲ್ಲ.
ಗಾಜಿಪುರ ಜಿಲ್ಲೆಯ ಪಶ್ಚಿಮ ಹರಿನಾಲ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಭಯೋತ್ಪಾದನಾ ವಿರೋಧಿ ದಾಳಿಯಲ್ಲಿ ಭದ್ರತಾ ಪಡೆ ಮನೆಯೊಂದನ್ನು ಸುತ್ತುವರೆದು ಈ ಕಾರ್ಯಾಚರಣೆ ನಡೆಸಿದೆ. ಎಕೆ-47 ಬಂಧೂಕು, ಬಾಂಬ್ ತಯಾರಿಸುವ ವಸ್ತುಗಳು, ಲ್ಯಾಪ್ ಟಾಪ್ ಮತ್ತು ಬುಲೆಟ್ ಗಳನ್ನು ವಶಪಡಿಸಿಕೊಂಡಿರುವುದಾಗಿ ಹಿರಿಯ ಅಧಿಕಾರಿ ಹೇಳಿದ್ದಾರೆ ಎಂದು ಢಾಕಾ ಟ್ರಿಬ್ಯುನ್ ವರದಿ ಮಾಡಿದೆ.
ಒಂದು ತಿಂಗಳ ಹಿಂದೆಯಷ್ಟೇ ಕಟ್ಟಿದ್ದ ಈ ಕಟ್ಟಡವನ್ನು ಭಯೋತ್ಪಾದಕರು ಬಾಡಿಗೆಗೆ ಪಡೆದಿದ್ದರು ಎಂದು ಪ್ರಾದೇಶಿಕ ನಿವಾಸಿಗಳು ಹೇಳಿದ್ದಾರೆ.