ಪಾಟ್ನಾ: ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಸಮವಸ್ತ್ರದಲ್ಲಿ ಬದಲಾವಣೆ ಮಾಡಿಕೊಂಡು ಚಡ್ಡಿಯಿಂದ, ಪ್ಯಾಂಟ್ ಗೆ ಪ್ರಗತಿಯಾಗಿರುವ ಹಿನ್ನಲೆಯಲ್ಲಿ ಇದಕ್ಕೆ ಕಾರಣ ತಮ್ಮ ಪತ್ನಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಕಾರಣ ಎಂದು ಆರ್ ಜೆ ಡಿ ಅಧ್ಯಕ್ಷ ಲಾಲು ಪ್ರಸಾದ್ ಬುಧವಾರ ಹೇಳಿದ್ದಾರೆ.
"ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಪ್ಯಾಂಟ್ ಧರಿಸುವಂತೆ ನಾವೇ ಒತ್ತಡ ಹೇರಿದ್ದು. ಅವರಿಗೆ ಸಭ್ಯತೆ ಕಡಿಮೆ ಎಂದು ರಾಬ್ಡಿ ದೇವಿ ಒಮ್ಮೆ ಪ್ರತಿಕ್ರಿಯಿಸಿದ್ದರು. ಹಿರಿಯ ಕಾರ್ಯಕರ್ತರು ನಾಚಿಕೆಯಿಲ್ಲದೆ ಚಡ್ಡಿಗಳಲ್ಲಿ ಓಡಾಡುತ್ತಿದ್ದರು" ಎಂದು ಲಾಲು ವರದಿಗಾರರಿಗೆ ಹೇಳಿದ್ದಾರೆ.
ಅವರ ಸದಸ್ಯರು ಪ್ಯಾಂಟ್ ಗೆ ಮೊರೆ ಹೋದ ಒಂದು ದಿನದ ನಂತರ ಬಲಪಂಥೀಯ ಸಂಘಟನೆಯ ಬಗ್ಗೆ ಲಾಲು ತಮ್ಮ ಹಾಸ್ಯದ ಧಾಟಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
"ಈ ಆರ್ ಎಸ್ ಎಸ್ ಮುದುಕರಿಗೆ ಸಾರ್ವಜನಿಕವಾಗಿ ಚಡ್ಡಿಯಲ್ಲಿ ಓಡಾಡುವುದಕ್ಕೆ ನಾಚಿಕೆಯಾಗುವುದಿಲ್ಲವೇ?" ಎಂದು ಜನವರಿಯಲ್ಲಿ ತಮ್ಮ ಪತ್ನಿ ಮಾಡಿದ್ದ ಪ್ರತಿಕ್ರಿಯೆ ಈ ಹಿಂದುತ್ವ ಸಂಘಟನೆಯನ್ನು ಮುಜುಗರಕ್ಕೆ ಒಳಪಡಿಸಿತ್ತು ಎಂದು ಆರ್ ಜೆ ಡಿ ಮುಖಂಡ ಹೇಳಿದ್ದು "ರಾಬ್ಡಿ ನೀಡಿದ್ದ ಈ ಪ್ರತಿಕ್ರಿಯೆ ಆರ್ ಎಸ್ ಎಸ್ ಸಮವಸ್ತ್ರ ಬದಲಿಸಿಕೊಳ್ಳುವಂತೆ ಒತ್ತಡ ಹಾಕಿತು" ಎಂದು ಕೂಡ ಹೇಳಿದ್ದಾರೆ.
ಈಗ ಆರ್ ಎಸ್ ಎಸ್ ಅವರ ಮನಸ್ಥಿತಿಯನ್ನು ಕೂಡ ಬದಲಿಸಿಕೊಳ್ಳಲು ನಾವು ಹಾಗೆಯೇ
ಒತ್ತಡ ಹೇರಬೇಕು ಎಂದಿರುವ ಲಾಲು "ಈಗ ಸರಿ, ಅವರು ಪ್ಯಾಂಟ್ ತೊಡುವಂತೆ ನಾವು ಒತ್ತಡ ಹೇರಿದ್ದೇವೆ... ಆದರೆ ಈಗ ಅವರ ಯೋಚನಾ ಲಹರಿಯಲ್ಲಿ ಬದಲಾವಣೆ ಬೇಕಿದೆ... ಅವರು ಆಯುಧಗಳನ್ನು ತೊರೆಯುವಂತೆ ಒತ್ತಡ ಹಾಕಲಿದ್ದೇವೆ ಮತ್ತು ದ್ವೇಷ ಕಾರಲು ಬಿಡುವುದಿಲ್ಲ" ಎಂದಿದ್ದಾರೆ.
ಈ ಹಿಂದೆ ರಾಬ್ಡಿ ದೇವಿ ನೀಡಿದ್ದ ಹೇಳಿಕೆಯನ್ನು ಬಿಜೆಪಿ ಮುಖಂಡರು ಟೀಕಿಸಿದ್ದರು. "ಅವರು 19 ನೆಯ ಶತಮಾನದ ಮನಸ್ಥಿಯ ಹೆಂಗಸು" ಎಂದು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಟೀಕಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos