ನವದೆಹಲಿ: ದೆಹಲಿ ಸರ್ಕಾರದ ಎಲ್ಲಾ ನಿರ್ಧಾರಗಳಿಗೂ ಲೆಫ್ಟಿನೆಂಟ್ ಗವರ್ನರ್ ಅವರೇ ಆಡಳಿತ ಅಧಿಕಾರಿ ಎಂದು ದೆಹಲಿ ಹೈಕೋರ್ಟ್ ನೀಡಿದ ಆದೇಶವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿರುವ ಹಿನ್ನಲೆಯಲ್ಲಿ, ಇದಕ್ಕೆ ಪ್ರತಿಕ್ರಿಯೆ ಕೋರಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.
ನ್ಯಾಯಾಧೀಶ ಎ ಕೆ ಸಿಕ್ರಿ ಮತ್ತಿ ಎನ್ ವಿ ರಮಣ ಒಳಗೊಂಡ ನ್ಯಾಯ ಪೀಠ ಲೆಫ್ಟಿನೆಂಟ್ ಗವರ್ನರ್ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ಕೇಜ್ರಿವಾಲ್ ಸರ್ಕಾರದ ಅರ್ಜಿಯ ಬಗ್ಗೆ ಪ್ರತಿಕ್ರಿಯಿಸಲು ಆರು ವಾರಗಳ ಸಮಯ ನೀಡಿದೆ.
ಕೇಂದ್ರ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರ ಉತ್ತರಕ್ಕೆ ಪ್ರತಿಕ್ರಿಯೆ ನೀಡಲು ದೆಹಲಿ ಸರ್ಕಾರಕ್ಕೆ ನ್ಯಾಯ ಪೀಠ ಎರಡು ವಾರಗಳ ಸಮಯ ನೀಡಿದೆ.
ಈ ಸಂಬಂಧದ ಎಲ್ಲ ಅರ್ಜಿಗಳನ್ನು ವಿಚಾರಣೆ ನಡೆಸಲು ನ್ಯಾಯಾಲಯ ನವೆಂಬರ್ 15 ರಂದು ಸಮಯ ನಿಗದಿಪಡಿಸಿದೆ.