ದಾವಣಗೆರೆ: ಉಡುಪಿ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗ ಅಧಿಕಾರಿಯ ಹತ್ಯೆ ಯತ್ನ ಪ್ರಕರಣ ಮಾಸುವ ಮುನ್ನವೇ ದಾವಣಗೆರೆ ಉಪ ವಿಭಾಗ ಅಧಿಕಾರಿ ಹಾಗೂ ತಹಶೀಲ್ದಾರ್ ಮೇಲೆ ಲಾರಿ ಹತ್ತಿಸಿ ಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ನಡೆದಿದೆ.
ದಾವಣಗೆರೆ ತಾಲೂಕಿನ ಹಳೇಬಾತಿ ಗ್ರಾಮದಲ್ಲಿ ಅಕ್ರಮವಾಗಿ ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಸಂಗ್ರಹಿಸಿಟ್ಟ ಗೋದಾಮಿನ ಮೇಲೆ ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ ಮತ್ತು ತಹಶೀಲ್ದಾರ್ ಸಂತೋಷ್ ಕುಮಾರ್ ಅವರು ದಾಳಿ ನಡೆಸಿದ್ದು, ಈ ವೇಳೆ ಇಬ್ಬರ ಮೇಲೆ ಲಾರಿ ಹತ್ತಿಸಲೆತ್ನಿಸಿ ದಂಧೆಕೋರರು ಅಟ್ಟಹಾಸಗೈದಿದ್ದಾರೆ.
ಉಮಾಪತಿ ಎಂಬುವವರಿಗೆ ಸೇರಿದ್ದ ರೈಸ್ ಮಿಲ್ ಮೇಲೆ ಕುಮಾರಸ್ವಾಮಿ ಮತ್ತು ಸಂತೋಷ್ ಕುಮಾರ್ ಅವರು ಇಂದು ದಿಢೀರ್ ದಾಳಿ ನಡೆಸಿ, ಲಾರಿ ತಡೆದಾಗ, ಚಾಲಕ ಲಾರಿಯನ್ನು ನಿಲ್ಲಿಸದೆ ಮೈಮೇಲೆ ಹತ್ತಿಸಲೆತ್ನಿಸದ್ದಾನೆ. ರೈಸ್ ಮಿಲ್ ಮಾಲೀಕ ಹಾಗೂ ಚಾಲಕ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾರೆ.
ತಹಶೀಲ್ದಾರ್ ಸಂತೋಷ್ ಕುಮಾರ್ ಮೇಲೆ ರೈಸ್ ಮಿಲ್ ಮಾಲೀಕ ಉಮಾಪತಿ ಹಾಗೂ ಈತನ ಪುತ್ರ ಪ್ರಶಾಂತ್ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮಾಲೀಕ ಉಮಾಪತಿ ಹಾಗೂ ಆತನ ಮಗ ಪ್ರಶಾಂತ್ ನನ್ನ ಬಂಧಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos