ಪ್ರಧಾನ ಸುದ್ದಿ

ವಿಜಯ್ ಮಲ್ಯ ಹಸ್ತಾಂತರಿಸುವಂತೆ ಲಂಡನ್ ಕೋರ್ಟ್ ಗೆ ಭಾರತೀಯ ಹೈಕಮಿಷನ್, ಸಿಬಿಐ ಒತ್ತಾಯ

Lingaraj Badiger
ನವದೆಹಲಿ: ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ವೆಸ್ಟ್ ಮಿನಿಸ್ಟರ್ಸ್ ಕೋರ್ಟ್ ಗೆ ಭಾರತೀಯ ಹೈಕಮಿಷನ್ ಹಾಗೂ ಸಿಬಿಐ ಒತ್ತಾಯಪಡಿಸಲಿದೆ.
ಐಡಿಬಿಐ ಬ್ಯಾಂಕ್ ನಿಂದ ಸಾಲ ಪಡೆದು ವಂಚಿಸಿರುವ ವಿಜಯ್ ಮಲ್ಯ ಅವರು ದೇಶದ ಕಾನೂನು ಉಲ್ಲಂಘಿಸಿದ್ದು, ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಸಿಬಿಐ ಹಾಗೂ ಲಂಡನ್ ನಲ್ಲಿರುವ ಭಾರತೀಯ ಹೈಕಮಿಷನ್ ಕೋರ್ಟ್ ಗೆ ಆಗ್ರಹಪಡಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
'ವಿಜಯ್ ಮಲ್ಯ ಪ್ರಹಸನಕ್ಕೆ ನಾವು ಒಂದು ಅಂತ್ಯ ಹಾಡಲು ಬಯಸಿದ್ದು, ಮಲ್ಯ ಹಸ್ತಾಂತರ ಪ್ರಕರಣ ಒಂದು ಪ್ರಮುಖ ಪ್ರಕರಣವಾಗಿ ಪರಿಗಣಿಸಿರುವುದಾಗಿ ಮೂಲಗಳು ತಿಳಿಸಿವೆ.
ಭಾರತದಲ್ಲಿ ಘೋಷಿತ ಅಪರಾಧಿಯಾಗಿ ಸಾಲದ ದೊರೆ ವಿಜಯ್ ಮಲ್ಯ ಅವರು ಇಂದು ಮಧ್ಯಾಹ್ನ ಸ್ಕಾಟ್ ಲ್ಯಾಂಡ್ ಯಾರ್ಡ್ ಪೊಲೀಸರು ಬಂಧಿಸಿ, ಬಳಿಕ ವೆಸ್ಟ್ ಮಿನಿಸ್ಟರ್ಸ್ ಕೋರ್ಟ್ ಗೆ ಹಾಜರುಪಡಿಸಿದ್ದರು.
ವಿಚಾರಣೆ ನಡೆಸಿದ ವೆಸ್ಟ್ ಮಿನಿಸ್ಟರ್ಸ್ ಮ್ಯಾಜಿಸ್ಟ್ರೇಟ್ ಕೋರ್ಟ್, ಕೇವಲ ಮೂರು ಗಂಟೆಗಳಲ್ಲೇ ವಿಜಯ್ ಮಲ್ಯ ಅವರನ್ನು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಇಂದಿನಿಂದ ವಿಚಾರಣೆ ಆರಂಭವಾಗಿದ್ದು, ವಿಚಾರಣೆ ಬಳಿಕ ಆರೋಪಿ ವಿಜಯ್ ಮಲ್ಯ ಅವರಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. 
ಕಳೆದ ಫೆಬ್ರವರಿಯಲ್ಲಿ ವಿಜಯ್ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಭಾರತ ಮಾಡಿದ್ದ ಮನವಿಯನ್ನು ಬ್ರಿಟಿಷ್ ಸರ್ಕಾರ ಪುರಷ್ಕರಿಸಿದ್ದು, ಅದನ್ನು ವೆಸ್ಟ್ ಮಿನಿಸ್ಟರ್ಸ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ರವಾನಿಸಿತ್ತು.
ಭಾರತ–ಬ್ರಿಟನ್‌ ನಡುವಣ ಪರಸ್ಪರ ಕಾನೂನು ನೆರವು ಒಪ್ಪಂದ(ಎಂಎಲ್‌ಎಟಿ)ದ ಅಡಿಯಲ್ಲಿ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಬ್ರಿಟನ್‌ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತವಾಗಿ ಮನವಿ ಮಾಡಿತ್ತು. ಅದನ್ನು ಬ್ರಿಟನ್ ಸರ್ಕಾರ ಪುರಷ್ಕರಿಸಿತ್ತು. ಅಲ್ಲದೆ ಮಲ್ಯ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸುವ ಬಗ್ಗೆ ಲಂಡನ್ ಕೋರ್ಟ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿತ್ತು.
9 ಸಾವಿರ ಕೋಟಿ ರುಪಾಯಿ ಸಾಲ ಮಾಡಿಕೊಂಡು ದೇಶದಿಂದ ಪಲಾಯನ ಮಾಡಿರುವ ಉದ್ಯಮಿ ವಿಜಯ್ ಮಲ್ಯ ಅವರ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಹಾಗೂ ಕೋರ್ಟ್ ಗಳಿಂದ ಹಲವು ಜಾಮೀನು ರಹಿತ ವಾರಂಟ್ ಜಾರಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಆದರೆ ಇದೀಗ ಮಲ್ಯ ಅವರನ್ನು ದೇಶಕ್ಕೆ ಕರೆತರುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.
SCROLL FOR NEXT