ಪ್ರಧಾನ ಸುದ್ದಿ

ಸಂಧಾನ ಯಶಸ್ವಿ; ಎಐಎಡಿಎಂಕೆಯಿಂದ ಚಿನ್ನಮ್ಮ-ದಿನಕರನ್ ಗೆ ಗೇಟ್ ಪಾಸ್ ಸಾಧ್ಯತೆ!

Srinivasamurthy VN

ಚೆನ್ನೈ: ನಿರೀಕ್ಷೆಯಂತೆಯೇ ತಮಿಳುನಾಡಿನಲ್ಲಿ ಇತಿಹಾಸ ಮರುಕಳಿಸಿದ್ದು, ಜಯಲಲಿತಾ ಅವರ ಸಾವಿನ ಬಳಿಕ ಇಬ್ಭಾಗವಾಗಿದ್ದ ಎಐಎಡಿಎಂಕೆ ಪಕ್ಷ ಮತ್ತೆ ಒಂದಾಗಿದೆ.

ನಿನ್ನೆ ನಡೆದ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು, ಪನ್ನೀರ್ ಸೆಲ್ವಂ ಬಣದ ಬೇಡಿಕೆಯಂತೆ ಶಶಿಕಲಾ ತಂಡವನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಪಕ್ಷದ ಚಿಹ್ನೆ ‘ಎರಡೆಲೆ’  ಪಡೆಯುವುದಕ್ಕಾಗಿ ಚುನಾವಣಾ ಆಯೋಗಕ್ಕೆ ಲಂಚ ನೀಡುವ ಯತ್ನ ನಡೆಸಿ ಸಿಕ್ಕಿಬಿದ್ದಿರುವ ದಿನಕರನ್ ವಿರುದ್ಧ ಕೆಂಡಾಮಂಡಲವಾಗಿದ್ದ ಪಳನಿಸ್ವಾಮಿ ಸರ್ಕಾರ ದಿಢೀರ್ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಪನ್ನೀರಸೆಲ್ವಂ  ಸಾಂಗತ್ಯಕ್ಕೆ ಮೊರೆ ಹೋಯಿತು. ಈ ಸಂಧಾನ ಪ್ರಕ್ರಿಯೆಗಾಗಿ ಪಕ್ಷದ 9 ಹಿರಿಯರ ತಂಡ ಸೆಲ್ವಂ ಜತೆ ಮಾತುಕತೆಯನ್ನೂ ನಡೆಸಿತ್ತು.

ಪಕ್ಷದ ಜತೆ ವಿಲೀನವಾಗಲು ಪನ್ನೀರ್ ಸಮ್ಮತಿಸಿದರಾದರೂ ಇದಕ್ಕೆ ಶಶಿಕಲಾ ಹಾಗೂ ದಿನಕರನ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂಬ ಷರತ್ತು ಮುಂದಿಟ್ಟಿದ್ದರು. ಮಂಗಳವಾರ ರಾತ್ರಿ ನಡೆದ ಎಐಎಡಿಎಂಕೆ ಸಭೆಯಲ್ಲಿ ಈ  ಇಬ್ಬರನ್ನು ಪಕ್ಷದಿಂದ ಉಚ್ಚಾಟಿಸುವ ಮಹತ್ವದ ತೀರ್ಮಾನ ಹೊರಬಿದ್ದಿದೆ. ಮುಖ್ಯಮಂತ್ರಿ ಕೈಗೊಂಡ ಈ ನಿರ್ಣಯಕ್ಕೆ 122 ಶಾಸಕರು ಬೆಂಬಲ ಸೂಚಿಸಿದ್ದಾರೆಂದು ಸಚಿವ ಡಿ. ಜಯಕುಮಾರ್ ಮಾಹಿತಿ ನೀಡಿದ್ದಾರೆ. ಶಶಿಕಲಾ ಅವರ ಕುಟುಂಬ, ಪಕ್ಷದ ಉಪಪ್ರಧಾನ ಕಾರ್ಯದರ್ಶಿಯಾಗಿದ್ದ ಟಿಟಿವಿ ದಿನಕರನ್ ಹಾಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಮುಖಂಡರನ್ನು ಒಳಗೊಂಡ ಉನ್ನತಮಟ್ಟದ ಸಮಿತಿಯೇ ಇನ್ಮುಂದೆ ಪಕ್ಷವನ್ನು ಮುನ್ನಡೆಸಲಿದೆ ಎಂದು  ಸಚಿವ ಜಯಕುಮಾರ್ ಹೇಳಿದ್ದಾರೆ.

ಜಯಲಲಿತಾ ಅವರ ಸಾವಿನ ಬಳಿಕ ಪಕ್ಷದಲ್ಲಿ ಉಂಟಾಗಿದ್ದ ಆಂತರಿಕ ಭಿನ್ನಮತದಿಂದಾಗಿ ಪನ್ನೀರ್ ಸೆಲ್ವಂ ಬಣ ಬೇರೆಯಾಗಿತ್ತು. ಹೀಗಾಗಿ ಪಕ್ಷದ ಗುರುತಾದ ಎರಡು ಎಲೆಗಳನ್ನು ಚುನಾವಣಾ ಆಯೋಗ ಹಿಂದಕ್ಕೆ ಪಡೆದಿತ್ತು.  ಜಯಲಲಿತಾ ಅವರ ಸಾವಿನ ಬಳಿಕ ತೆರವಾಗಿದ್ದ ಆರ್ ಕೆ ನಗರ ಕ್ಷೇತ್ರಕ್ಕೆ ಘೋಷಣೆಯಾಗಿರುವ ಉಪ ಚುನಾವಣೆಗೆ ಎರಡೂ ಬಣಗಳಿಗೂ ಪ್ರತ್ಯೇಕ ಚಿನ್ಹೆ ನೀಡಲಾಗಿತ್ತು. ಆದರೆ ಮತದಾರರಿಗೆ ವ್ಯಾಪಕ ಹಣ ಹಂಚಿಕೆಯಾದ  ಹಿನ್ನಲೆಯಲ್ಲಿ ಮತದಾನವನ್ನು ಆಯೋಗ ಮುಂದೂಡಿತ್ತು.

ಅಲ್ಲದೆ ಆಯೋಗದ ಅಧಿಕಾರಿಗೆ ಚಿನ್ಹೆ ನೀಡಲು ಲಂಚ ನೀಡದ ಆರೋಪದ ಮೇರೆಗೆ ಶಶಿಕಲಾ ಬಣದ ಟಿಟಿವಿ ದಿನಕರನ್ ವಿರುದ್ಧ ಎಫ್ ಐಆರ್ ಕೂಡ ದಾಖಲಾಗಿತ್ತು. ಇದು  ಪಳನಿಸ್ವಾಮಿ ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿತ್ತು. ಅಲ್ಲದೆ ಭವಿಷ್ಯದಲ್ಲಿ ಪಕ್ಷದ ಮೇಲೆ ಆಗಬಹುದಾದ ವ್ಯತಿರಿಕ್ತ ಪರಿಣಾಮವನ್ನು ತಡೆಯುವ ಉದ್ದೇಶದಿಂದಲೇ ಪಳನಿಸ್ವಾಮಿ ಪನ್ನೀರ್ ಸೆಲ್ವಂ ರೊಂದಿಗೆ ರಾಜಿ  ಮಾಡಿಕೊಂಡಿದ್ದಾರೆ. ಅಲ್ಲದೆ ಪಕ್ಷದ ಇಂದಿನ ಸ್ಥಿತಿಗೆ ಕಾರಣವಾದ ಶಶಿಕಲಾ ತಂಡವನ್ನು ಪಕ್ಷದಿಂದ ಹೊರಗಿಡಲು ನಿರ್ಧರಿಸಿದ್ದಾರೆ.

SCROLL FOR NEXT