ನವದೆಹಲಿ: ಛತ್ತೀಸಘರ್ ನಲ್ಲಿ ನಕ್ಸಲರು ದಾಳಿ ನಡೆಸಿ ೨೫ ಸಿ ಆರ್ ಪಿ ಎಫ್ ಜವಾನರನ್ನು ಬರ್ಬರವಾಗಿ ಹತ್ಯೆಮಾಡಿರುವುದನ್ನು ಮಂಗಳವಾರ ಖಂಡಿಸಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಮಾವೋವಾದಿ ಹಿಂಸೆಯನ್ನು 'ಕೆಂಪು ಭಯೋತ್ಪಾದನೆ' ಎಂದು ಕರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದೆ.
"ಸಿಪಿಐ ಈ ಹತ್ಯೆಗಳನ್ನು ತೀವ್ರವಾಗಿ ಖಂಡಿಸುತ್ತದೆ.. ಸುಕ್ಮಾದಲ್ಲಿ ನಡೆದ.. ಜವಾನರಿಗೆ ಗೌರವ ಸಲ್ಲಿಸುತ್ತೇವೆ ಮತ್ತು ಅವರ ಕುಟುಂಬಗಳಿಗೆ ಪಕ್ಷ ಸಂತಾಪ ಸೂಚಿಸುತ್ತದೆ" ಎಂದು ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ.
"ಆದರೆ ಇದನ್ನು 'ಕೆಂಪು ಭಯೋತ್ಪಾದನೆ' ಎಂದು ಕರೆಯುವುದಕ್ಕೆ" ಪಕ್ಷ ವಿರೋಧ ವ್ಯಕ್ತಪಡಿಸಿದೆ.
"ಸಿಪಿಐ ಒಳಗೊಂಡಂತೆ ಬುಡಕಟ್ಟು ಜನರ ಒಳಿತಿಗೆ ಕೆಲಸ ಮಾಡುತ್ತಿರುವ ಹಲವು ಎಡಪಕ್ಷಗಳು ಛತ್ತೀಸಘರ್ ನಲ್ಲಿವೆ. ಮಾವೋವಾದಿಗಳನ್ನು ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ಮತ್ತು ಅವರ ಹೋರಾಟದ ಮಾದರಿಯನ್ನು ಅವರೆಲ್ಲಾ ಒಪ್ಪುವುದಿಲ್ಲ" ಎಂದು ಸಿಪಿಐ ಹೇಳಿದೆ.
"ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶಾಲವಾದ ಗ್ರಹಿಕೆಯಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳುವ ಅವಶ್ಯಕತೆ ಇದೆ" ಎಂದಿರುವ ಸಿಪಿಐ, "ಈ ಭಾಗದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಸೋತಿರುವುದೇಕೆ ಎಂದು ತಿಳಿದುಕೊಳ್ಳಬೇಕಿದೆ" ಎಂದು ಕೂಡ ಹೇಳಿದೆ.
"ಸಿ ಆರ್ ಪಿ ಎಫ್ ಗೆ ನಿಯತವಾದ ಮುಖ್ಯಸ್ಥ ಇಲ್ಲ ಮತ್ತು ಗೌಪ್ಯದಳದ ಮಾಹಿತಿಗಳಿಲ್ಲ ಎಂದು ತಿಳಿಯುವುದಕ್ಕೆ ಅಚ್ಚರಿಯಾಗಿದೆ. ಅಂತ ಪಕ್ಷದಲ್ಲಿ ಇಂತಹ ಹಿಂಸೆಯನ್ನು ತಡೆಗಟ್ಟಬಹುದಿತ್ತು" ಎಂದು ಕೂಡ ಸಿಪಿಐ ಹೇಳಿದೆ.
ಛತ್ತೀಸಘರ್ ನ ಸುಕ್ಮಾದ ದಟ್ಟ ಅರಣ್ಯದಲ್ಲಿ ಬೀಡುಬಿಟ್ಟಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ ಮೇಲೆ ಮಹಿಳೆಯರು ಸೇರಿದಂತೆ ಶಸ್ತ್ರಸಜ್ಜಿತ ೩೦೦-೪೦೦ ಮಾವೋವಾದಿಗಳು ಸೋಮವಾರ ದಾಳಿ ಮಾಡಿ ೨೫ ಜನರನ್ನು ಹತ್ಯೆ ಮಾಡಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos