ನವದೆಹಲಿ: ಸಾಮಾಜಿಕ ಕಾರ್ಯಕರ್ತ ಅಣ್ಣ ಹಜಾರೆ ಅವರನ್ನು "ಮೋಸಗಾರ" ಎಂದು ಕರೆದ ಟ್ವೀಟ್ ಗಳನ್ನು ನಾನು ಬೆಂಬಲಿಸಿಲ್ಲ ಮತ್ತು ನನ್ನ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಅಣ್ಣ ಹಜಾರೆ "ಭಾರತೀಯ ಜನತಾ ಪಕ್ಷದ ಏಜೆಂಟ್ ಮತ್ತು ಮೋಸಗಾರ" ಎಂದು ಬಣ್ಣಿಸಲಾದ ಟ್ವೀಟ್ ಗಳನ್ನು ಸಿಸೋಡಿಯಾ ಮರು ಟ್ವೀಟಿಸಿದ್ದರು ಎನ್ನಲಾಗಿತ್ತು.
"ದಯವಿಟ್ಟು ಅವುಗಳನ್ನು (ಟ್ವೀಟ್ ಗಳನ್ನು) ನಂಬಬೇಡಿ. ಅಣ್ಣಾ ಅವರ ಮೇಲೆ ನನಗೆ ಅತೀವ ಗೌರವವಿದೆ. ಅವರ ವಿರುದ್ಧ ಎಂದಿಗೂ ಅಂತಹ ಮಾತುಗಳನ್ನು ಬಳಸಲಾರೆ" ಎಂದು ಸಿಸೋಡಿಯಾ ಹೇಳಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಅವರು "ನನ್ನ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು. ಯಾರೋ ಅಣ್ಣ ಹಜಾರೆ ವಿರುದ್ಧವಾದ ಟ್ವೀಟ್ ಗಳನ್ನು ಮರು ಟ್ವೀಟ್ ಮಾಡಿದ್ದಾರೆ. ಅವುಗಳನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದೇನೆ. ಆದರೆ ಅವುಗಳು ಡಿಲೀಟ್ ಕೂಡ ಆಗುತ್ತಿಲ್ಲ" ಎಂದು ಬರೆದಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅಧಿಕಾರದ ಹಿಂದೆ ಬಿದ್ದಿರುವುದೇ ಆಮ್ ಆದ್ಮಿ ಪಕ್ಷದ ದೆಹಲಿ ಮುನ್ಸಿಪಲ್ ಚುನಾವಣೆಯ ದಯನೀಯ ಸೋಲಿಗೆ ಕಾರಣ ಎಂದು ಹಜಾರೆ ಟೀಕಿಸಿದ್ದರು.