ಪ್ರಧಾನ ಸುದ್ದಿ

ಅಮರನಾಥ ಗುಹೆಯನ್ನು ಶಬ್ದರಹಿತ ಪ್ರದೇಶ ಎಂದು ಘೋಷಣೆ ಮಾಡಿಲ್ಲ: ಎನ್ ಜಿಟಿ ಸ್ಪಷ್ಟನೆ

Srinivasamurthy VN
ನವದೆಹಲಿ: ಪವಿತ್ರ ಯಾತ್ರಾ ಸ್ಥಳವಾದ ಅಮರನಾಥ್ ಗುಹೆಯನ್ನು ಶಬ್ದರಹಿತ ಪ್ರದೇಶ ಎಂದು ಘೋಷಣೆ ಮಾಡಿಲ್ಲ ಎಂದು ಗುರುವಾರ ಹಸಿರು ನ್ಯಾಯಾಧಿಕರಣ ಸ್ಪಷ್ಟನೆ ನೀಡಿದೆ.
ಅಮರನಾಥ್ ಗುಹೆಯನ್ನು ಶಬ್ದರಹಿತ ಪ್ರದೇಶವಾಗಿ ಘೋಷಣೆ ಮಾಡುವ ಸಂಬಂಧ ಇಂದು ಮುಂದುವರಿದ ವಿಚಾರಣೆಯಲ್ಲಿ ಅಮರನಾಥ್ ಗುಹೆಯನ್ನು ಶಬ್ದರಹಿತ ಪ್ರದೇಶ ಎಂದು ಎನ್ ಜಿಟಿ ಇನ್ನೂ ಘೋಷಣೆ ಮಾಡಿಲ್ಲ ಎಂದು  ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಹೇಳಿದ್ದಾರೆ. 
ಈ ಹಿಂದೆ ನಡೆದ ವಿಚಾರಣೆಯಲ್ಲಿ ಅಮರನಾಥ್ ಗುಹೆಯೂ ಸೇರಿದಂತೆ ಸುತ್ತಮುತ್ತಲ ಪ್ರದೇಶವನ್ನು ಶಬ್ದ ರಹಿತ ಪ್ರದೇಶ ಎಂದು ಘೋಷಣೆ ಮಾಡುವ ಸಂಬಂಧ ನಿರ್ಧಾರ ಕೈಗೊಳ್ಳುವುದಾಗಿ ಎನ್ ಜಿಟಿ ಹೇಳಿತ್ತು. ಕಾಶ್ಮೀರದಲ್ಲಿ  ಚಳಿಗಾಲ ಆರಂಭವಾಗಿದ್ದು, ಈಗಾಗಲೇ ಮೊದಲ ಹಂತದ ಹಿಮಮಳೆ ಕೂಡ ಆರಂಭವಾಗಿದೆ. ಹೀಗಾಗಿ ಅಮರನಾಥ್ ಗುಹೆಯ ಸುತ್ತಮುತ್ತ ಭಾರಿ ಪ್ರಮಾಣದ ಹಿಮ ಶೇಖರಣೆಯಾಗಿದೆ. ಶಬ್ದ ಮಾಡುವುದರಿಂದ ಅಲ್ಲಿನ  ಮಂಜುಗೆಡ್ಡೆಗಳ ಮೇಲೆ ಪರಿಣಾಮವಾಗಿ ಅವು ಜಾರುವ ಅಥವಾ ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಎನ್ ಜಿಟಿ ಅಭಿಪ್ರಾಯಪಟ್ಟಿತ್ತು. ಅಲ್ಲದೆ ಪವಿತ್ರ ಗುಹೆಯನ್ನು ಶಬ್ದರಹಿತ ಪ್ರದೇಶವಾಗಿ ಘೋಷಣೆ ಮಾಡುವ ಇಂಗಿತ  ವ್ಯಕ್ತಪಡಿಸಿತ್ತು.
ಎನ್ ಜಿಟಿ ಹೇಳಿಕೆ ಸಂಬಂಧ ಅಮರನಾಥ್ ಯಾತ್ರಾರ್ಥಿಗಳು ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಪ್ರತಿಭಟನೆಗೂ ಕೂಡ ಮುಂದಾಗಿ ಎನ್ ಜಿಟಿ ಆದೇಶವನ್ನು ತುಘಲಕ್ ಫತ್ವಾ ಎಂದು ಟೀಕಿಸಿದ್ದರು.
SCROLL FOR NEXT