ಎಐಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ
ಚೆನ್ನೈ: ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಒ ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ಹೆಚ್ಚುತ್ತಿರುವಂತೆ, ಆ ಸ್ಥಾನದ ಆಕಾಂಕ್ಷಿ ಮತ್ತು ಎಐಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್ ಭೇಟಿಗೆ ಶನಿವಾರ ಸಮಯಾವಕಾಶ ಕೋರಿದ್ದಾರೆ. ಇನ್ನು ಸ್ವಲ್ಪ ಕಾಲದವರೆಗೆ ಶಾಂತಿಯಿಂದ ಕಾಯಲಿದ್ದು "ನಂತರ ಅಗತ್ಯ ಹೆಜ್ಜೆ ಇರಿಸುತ್ತೇವೆ" ಎಂದಿದ್ದಾರೆ ಶಶಿಕಲಾ.
ಜಯ ಟಿವಿ ವಾಹಿನಿಯಲ್ಲಿ ಮಾತನಾಡಿದ ಶಶಿಕಲಾ ತಮಗೆ ಪ್ರಜಾಪ್ರಭುತ್ವ, ನ್ಯಾಯ ಮತ್ತು ಶಾಂತಿಯನ್ನು ಕಾಪಾಡುವುದರಲ್ಲಿ ನಂಬಿಕೆಯಿದೆ ಎಂದಿದ್ದಾರೆ.
"ಒಂದು ಸಮಯದವರೆಗೆ ನಾವು ಶಾಂತಿಯಿಂದ ಇರಬಹುದು. ಅನಂತರ ಏನು ಅಗತ್ಯವೋ ಅದನ್ನು ಮಾಡಬೇಕಾಗುತ್ತದೆ" ಎಂದು ಅವರು ಹೇಳಿದ್ದಾರೆ.
ಎಐಡಿಎಂಕೆ ಪಕ್ಷ ಕಬ್ಬಿಣದ ಕೋಟೆಯಿದ್ದಂತೆ ಎಂದಿರುವ ಅವರು ಅದನ್ನು ಅಲುಗಾಡಿಸಲು ಯಾರಿಗೂ ಸಾಧ್ಯವಿಲ್ಲ. ಪಕ್ಷದ ಕಾರ್ಯಕರ್ತರ ಸಂಖ್ಯೆ ೧.೫ ಕೋಟಿಗೂ ಹೆಚ್ಚಿದ್ದು, ಪಕ್ಷವನ್ನು ಒಡೆಯಲು ಬಯಸುವವವರಿಗೆ ಗೆಲುವು ಅಸಾಧ್ಯ ಎಂದು ಕೂಡ ಹೇಳಿದ್ದಾರೆ.
ನನಗೆ ಯಾವುದಕ್ಕೂ ಭಯಪಡುವ ಅಗತ್ಯ ಇಲ್ಲ ಎಂದು ಕೂಡ ಅವರು ಹೇಳಿದ್ದಾರೆ.
ಇದಕ್ಕೂ ಮುಂಚಿತವಾಗಿ ತಮ್ಮ ಬೆಂಬಲಿತ ಶಾಸಕರೊಂದಿಗೆ ಭೇಟಿ ಮಾಡಲು ಸಮಯ ನೀಡುವಂತೆ ಕೋರಿ ರಾಜ್ಯಪಾಲ ರಾವ್ ಅವರಿಗೆ ಪತ್ರ ಬರೆದಿದ್ದರು.
"...ಈಗ ಸೃಷ್ಟಿಯಾಗಿರುವ ಬಿಕ್ಕಟ್ಟಿನ ದೃಷ್ಟಿಯಿಂದ, ಇಂದು ಎಲ್ಲ ಬೆಂಬಲಿತ ಶಾಸಕರ (ವಿಧಾನ ಸಭಾ ಸದಸ್ಯರು) ಜೊತೆಗೆ ನಿಮ್ಮನ್ನು ಭೇಟಿ ಮಾಡಲು ಅವಕಾಶ ಕೊಡಿ. ಈ ಎಲ್ಲ ಶಾಸಕರು ಸರ್ಕಾರ ರಚಿಸಲು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ನನಗೆ ಬೆಂಬಲಿಸಿದ್ದಾರೆ.
"ಸಂವಿಧಾನದ, ಪ್ರಜಾಪ್ರಭುತ್ವದ ಮತ್ತು ರಾಜ್ಯ ಹಿತಾಸಕ್ತಿಯ ಸಾರ್ವಭೌಮತ್ವವನ್ನು ಕಾಪಾಡಲು ಗೌರವಾನ್ವಿತ ರಾಜ್ಯಪಾಲರು ಕೂಡಲೇ ಮುಂದಾಗುತ್ತಾರೆ ಎಂದು ನಂಬಿದ್ದೇನೆ" ಎಂದು ಕೂಡ ಪತ್ರದಲ್ಲಿ ಶಶಿಕಲಾ ಬರೆದಿದ್ದರು.
ಸರ್ಕಾರ ರಚಿಸಲು ತಮಗೆ ಶಾಸಕರು ಬೆಂಬಲ ಸೂಚಿಸಿ ಸಹಿ ಹಾಕಿರುವ ಪತ್ರವನ್ನು ಶಶಿಕಲಾ ಈಗಾಗಲೇ ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ಈ ಮಧ್ಯೆ ಒ ಪನ್ನೀರ್ ಸೆಲ್ವಂ ಅವರನ್ನು ಬೆಂಬಲಿಸಲು ಕೆಲವು ಮಂದಿ ಶಾಸಕರು, ಸಚಿವರು, ಸಂಸದರು ಮತ್ತು ಪಕ್ಷದ ಮುಖಂಡರು ಮುಂದೆ ಬಂದಿರುವುದು ವಿವಾದ ತಾರಕಕ್ಕೇರುವ ಸಂಭವವಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos