ಹರ್ದೋಯಿ: ಗುಜರಾತ್ ನಲ್ಲಿ ಹುಟ್ಟಿದ್ದರೂ ಉತ್ತರ ಪ್ರದೇಶವನ್ನು ತಮ್ಮ ಕರ್ಮಭೂಮಿಯನ್ನಾಗಿ ಆಯ್ಕೆ ಮಾಡಿಕೊಂಡಿರುವುದಾಗಿ ಗುರುವಾರ ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶದಲ್ಲಿ ಹುಟ್ಟಿ, ಗುಜರಾತ್ ಅನ್ನು ತನ್ನ ಕರ್ಮಭೂಮಿಯನ್ನಾಗಿಸಿಕೊಂಡಿದ್ದ ಮಹಾಭಾರತ ಸೂತ್ರಧಾರಿ ಶ್ರೀಕೃಷ್ಣನಿಗೆ ಹೋಲಿಸಿಕೊಂಡಿದ್ದಾರೆ.
ತಾವು ಉತ್ತರಪ್ರದೇಶದ ದತ್ತು ಪುತ್ರ ಎಂದು ಬಣ್ಣಿಸಿಕೊಂಡಿರುವ ಪ್ರಧಾನಿ ರಾಜ್ಯದ ಜನತೆಯನ್ನು ಎಂದಿಗೂ ಕೈಬಿಡುವುಇದಿಲ್ಲ ಎಂದಿದ್ದಾರೆ. ತಂದೆ ಮುಲಾಯಂ ಸಿಂಗ್ ಅವರೊಂದಿಗಿಗೆ ಒಡಕು ಸೃಷ್ಟಿಸಿಕೊಂಡಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.
"ಕೃಷ್ಣ ಹುಟ್ಟಿದ್ದು ಉತ್ತರ ಪ್ರದೇಶದಲ್ಲಿ ಆದರೆ ಗುಜರಾತ್ ಅನ್ನು ಕರ್ಮಭೂಮಿಯನ್ನಾಗಿಸಿಕೊಂಡ. ನಾನು ಗುಜರಾತ್ ನಲ್ಲಿ ಹುಟ್ಟಿದ್ದು ಆದರೆ ಉತ್ತರಪ್ರದೇಶ ನನ್ನನ್ನು ದತ್ತು ಸ್ವೀಕರಿಸಿತು. ಇದು ನನಗೆ ಗೌರವದ ವಿಷಯ. ಉತ್ತರ ಪ್ರದೇಶ ನನಗೆ ತಂದೆ-ತಾಯಿ ಇದ್ದಂತೆ. ನಾನು ತಂದೆ-ತಾಯಿಯನ್ನು ಕೈಬಿಡುವ ಮಗದಲ್ಲ. ನಾನು ಉತ್ತರಪ್ರದೇಶವನ್ನು ಸದಾ ನೋಡಿಕೊಳ್ಳುತ್ತೇನೆ.
"ನಾನು ದತ್ತು ಪುತ್ರನಾದರೂ ಉತ್ತರ ಪ್ರದೇಶ ಅಭಿವೃದ್ಧಿ ನನ್ನ ಕರ್ತವ್ಯ" ಎಂದು ಮೋದಿ ಉತ್ತರ ಪ್ರದೇಶದ ಚುನಾವಣಾ ರ್ಯಾಲಿಯಲ್ಲಿ ಭಾಷಣ ಮಾಡಿದ್ದಾರೆ.
ರಾಜ್ಯದ ಮೂರನೇ ಸುತ್ತಿನ ಮತದಾನದಲ್ಲಿ ಹರ್ದೋಯಿಯಲ್ಲಿ ಭಾನುವಾರ ಮತದಾನ ನಡೆಯಲಿದೆ.