ಮಕ್ಕಳ ಕಳ್ಳಸಾಗಾಣಿಕೆ ಆರೋಪದಲ್ಲಿ ಬಂಧನಗೊಂಡಿರುವ ಬಿಜೆಪಿ ನಾಯಕಿ ಜೂಹಿ ಚೌಧರಿ
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮಕ್ಕಳ ಕಳ್ಳಸಾಗಾಣಿಕೆ ಆರೋಪದಲ್ಲಿ ಬಿಜೆಪಿ ನಾಯಕಿ ಜೂಹಿ ಚೌಧರಿ ಬಂಧನಗೊಂಡಿರುವ ಹಿನ್ನಲೆಯಲ್ಲಿ, ಪೋಲೀಸರ ಕ್ರಮದ ಬಗ್ಗೆ ಬುಧವಾರ ಅನುಮಾನ ವ್ಯಕ್ತಪಡಿಸಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ, ಕೇಂದ್ರ ತನಿಖಾ ದಳ ಇದರ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
೧೭ ಮಕ್ಕಳನ್ನು ಕಳ್ಳ ಸಾಗಾಣಿಕೆ ಮಾಡಿದ ಆರೋಪದಲ್ಲಿ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಚೌಧರಿ ಅವರನ್ನು ಪಶ್ಚಿಮ ಬಂಗಾಳದ ದಾರ್ಜಿಲಿಂಗ್ ಜಿಲ್ಲೆಯಿಂದ ಮಂಗಳವಾರ ಬಂಧಿಸಲಾಗಿತ್ತು.
"ಮಮತಾ ಬ್ಯಾನರ್ಜಿ ಅವರ ಸರ್ಕಾರದ ಅಧೀರದಲ್ಲಿ ಪೊಲೀಸರು ರಾಜಕೀಯ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಠಾಣೆಗಳು ಪಕ್ಷದ ಕಚೇರಿಗಳಾಗಿ ಬದಲಾಗಿವೆ ಮತ್ತು ಅಧಿಕಾರಿಗಳು ಪಕ್ಷದ (ಆಡಳಿತ ತೃಣಮೂಲ ಕಾಂಗ್ರೆಸ್) ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ವಿಜಯವರ್ಗೀಯ ದೂರಿದ್ದಾರೆ.
ನೌಕರಿ ಅಪೇಕ್ಷಿತರಿಂದ ಹಣವನ್ನು ವಸೂಲಿ ಮಾಡಿದ ಆರೋಪದ ಮೇಲೆ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷ ಜಯಪ್ರಕಾಶ್ ಮಜುಂದಾರ್ ಅವರನ್ನು ಈ ಹಿಂದೆ ಬಂಧಿಸಿದ್ದರ ಬಗ್ಗೆ ಉಲ್ಲೇಖಿಸಿರುವ ವಿಜಯವರ್ಗೀಯ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಕಿರುಕುಳ ಕೊಡಲೆಂದೇ ಇದನ್ನು ಅಸ್ತ್ರವಾಗಿ ತೃಣಮೂಲ ಕಾಂಗ್ರೆಸ್ ಪಕ್ಷ ಬಳಸುತ್ತಿದೆ ಎಂದು ದೂರಿದ್ದಾರೆ.
"ನನಗೆ ಪೊಲೀಸ್ ತನಿಖೆಯಲ್ಲಿ ನಂಬಿಕೆಯಿಲ್ಲ. ಒಂದರ ನಂತರ ಒಂದು ಹಗರಣವನ್ನು ಹುಟ್ಟುಹಾಕುವ ಪ್ರಯತ್ನದಲ್ಲಿ ನಮ್ಮ ಪಕ್ಷದ ನಾಯಕರನ್ನು ಸುಳ್ಳು ಸುಳ್ಳೇ ಸಿಕ್ಕಿಸಿ ಬಂಧಿಸಲಾಗುತ್ತಿದೆ. ನಾವು ಈ ಸರ್ಕಾರವನ್ನಾಗಲಿ (ಪಶ್ಚಿಮ ಬಂಗಾಳ) ಅಥವಾ ಪೊಲೀಸರನ್ನಾಗಲಿ ನಂಬುವುದಿಲ್ಲ" ಎಂದು ಅವರು ಹೇಳಿದ್ದಾರೆ.
"ಅವರು ಯಾವುದೇ ಎಲ್ಲೆಗೆ ಹೋಗಲಿ. ನಮಗೆ ಕೇಂದ್ರ ತನಿಖಾ ದಳ ಈ ಪ್ರಕರಣವನ್ನು ತನಿಖೆ ಮಾಡಬೇಕಿದೆ" ಎಂದಿರುವ ವಿಜಯವರ್ಗೀಯ ತಮ್ಮ ಪಕ್ಷದ ಯಾರಾದರೂ ಈ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos