ನವದೆಹಲಿ: ಅಂತೂ ಪೆಟ್ರೋಲ್ ಬಂಕ್ ಮಾಲೀಕರ ಪ್ರತಿಭಟನೆಗೆ ಮಣಿದಿರುವ ಕೇಂದ್ರ ಸರ್ಕಾರ ಬಂಕ್ ಗಳಲ್ಲಿ ಕಾರ್ಡ್ ಪಾವತಿ ಮೇಲಿನ ವಹಿವಾಟು ಶುಲ್ಕ ತೆರವಿಗೆ ಮುಂದಾಗಿರುವುದಾಗಿ ಹೇಳಿದೆ.
ಕಾರ್ಡ್ ಪಾವತಿ ಮೇಲಿನ ವಹಿವಾಟು ಶುಲ್ಕ ತೆರವುಗೊಳಿಸುವಂತೆ ಪೆಟ್ರೋಲ್ ಬಂಕ್ ಮಾಲೀಕರ ಒಕ್ಕೂಟ ವ್ಯಾಪಕ ಪ್ರತಿಭಟನೆ ನಡೆಸಿತ್ತು. ಅಲ್ಲದೆ ಶುಲ್ಕ ತೆರವುಗೊಳಿಸದಿದ್ದರೆ ಪೆಟ್ರೋಲ್ ಬಂಕ್ ಗಳಲ್ಲಿ ಕಾರ್ಡ್ ಪಾವತಿಯನ್ನೇ ಸ್ವೀಕರಿಸುವುದಿಲ್ಲ ಎಂದು ಬೆದರಿಕೆ ಹಾಕಿತ್ತು. ಇದೀಗ ಬಂಕ್ ಮಾಲೀಕರ ಒತ್ತಾಯಕ್ಕೆ ಸರ್ಕಾರ ಮಣಿದಿದ್ದು, ಕಾರ್ಡ್ ಪಾವತಿ ಮೇಲಿನ ವಹಿವಾಟು ಶುಲ್ಕವನ್ನು ತೆರವುಗೊಳಿಸಲು ನಿರ್ಧರಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಗ್ರಾಹಕರು ಇನ್ನು ಪೆಟ್ರೋಲ್ ಬಂಕ್ ಗಳಲ್ಲಿ ಮಾಡುವ ನಗದು ರಹಿತ ಪಾವತಿಗೆ ಹೆಚ್ಚುವರಿ ಶುಲ್ಕ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ನಿನ್ನೆ ತಡರಾತ್ರಿಯಿಂದಲೂ ಈ ಬಗ್ಗೆ ಪೆಟ್ರೋಲ್ ಬಂಕ್ ಮಾಲೀಕರ ಒಕ್ಕೂಟಗಳೊಂದಿಗೆ ಕೇಂದ್ರ ಸಚಿವರು ಚರ್ಚೆ ನಡೆಸಿದ್ದು, ಚರ್ಚೆ ಬಳಿಕ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಇನ್ನು ಬ್ಯಾಂಕ್, ವ್ಯಾಪಾರಿಯಿಂದ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಶುಲ್ಕವನ್ನು ಭರಿಸುವವರು ಯಾರು ಎಂಬುದಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಬಂಕ್ ಮಾಲೀಕರು ಹಾಗೂ ಬ್ಯಾಂಕ್ ಗಳು ಚರ್ಚೆ ನಡೆಸುತ್ತಿದ್ದು, ಚರ್ಚೆ ಬಳಿಕ ನಿರ್ಧಾರ ಹೊರಬೀಳಲಿದೆ. " ಮುಂದಿನ ದಿನಗಳಲ್ಲಿ ಗ್ರಾಹಕರಿಗಾಗಲೀ ಅಥವಾ ಪೆಟ್ರೋಲ್ ಬಂಕ್ ನ ಮಾಲಿಕರಿಗಾಗಲೀ ಹೊರೆಯಾಗದಂತಹ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಗ್ರಾಹಕರಿಂದ ಕ್ರೆಡಿಟ್ ಕಾರ್ಡ್ ಮೂಲಕ ಬಂಕ್ ಗಳು ಸ್ವೀಕರಿಸುವ ಹಣಕ್ಕೆ ಶೇ. 1ರಷ್ಟು ಹಾಗೂ ಡೆಬಿಟ್ ಕಾರ್ಡ್ ಮೂಲಕ ಸ್ವೀಕರಿಸುವ ಹಣಕ್ಕೆ ಶೇ.0.25ರಿಂದ ಶೇ.1ರ ವರೆಗೆ ವಹಿವಾಟು ಶುಲ್ಕ ವಿಧಿಸಲಾಗುತ್ತಿತ್ತು. ಪ್ರಮುಖವಾಗಿ ಬ್ಯಾಂಕಿಂಗ್ ಕ್ಷೇತ್ರ ಮೂರು ಬ್ಯಾಂಕುಗಳಾದ ಐಸಿಐಸಿಐ, ಎಕ್ಸಿಸ್, ಎಚ್ಡಿಎಫ್ ಸಿ ಬ್ಯಾಂಕ್ಗಳು ಶುಲ್ಕಗಳನ್ನು ಹೇರಿದ್ದವು. ಇದರಿಂದ ಸಿಟ್ಟಾಗಿರುವ ಪೆಟ್ರೋಲಿಯಂ ಉತ್ಪನ್ನಗಳ ವಿತರಕರು, ಕಾರ್ಡ್ ಪಾವತಿಯನ್ನು ಸೋಮವಾರದಿಂದ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos