ಪ್ರಧಾನ ಸುದ್ದಿ

ಲೋಕಾಯುಕ್ತ ಹುದ್ದೆಗೆ ನ್ಯಾ. ವಿಶ್ವನಾಥ್ ಶೆಟ್ಟಿ ಹೆಸರು ಶಿಫಾರಸು ಮಾಡಲು ಸರ್ಕಾರ ನಿರ್ಧಾರ

Lingaraj Badiger
ಬೆಂಗಳೂರು: ಹಲವು ತಿಂಗಳುಗಳಿಂದ ಖಾಲಿ ಉಳಿದಿದ್ದ ಲೋಕಾಯುಕ್ತ ಹುದ್ದೆಗೆ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರ ಹೆಸರನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಶಿಫಾರಸು ಮಾಡಲು ಸೋಮವಾರ ನಿರ್ಧರಿಸಿದೆ.
ಈ ಸಂಬಂಧ ಇಂದು ಕುಮಾರಕೃಪಾ ಅತಿಥಿ ಗೃಹದಲ್ಲಿ ಉನ್ನತಾಧಿಕಾರ ಆಯ್ಕೆ ಸಮಿತಿ ಸಭೆಯಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ವಿಶ್ವನಾಥ್ ಶೆಟ್ಟಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮುಂದಿನ ಲೋಕಾಯುಕ್ತ ಹುದ್ದೆಗೆ ನ್ಯಾ.ವಿಶ್ವನಾಥ್ ಶೆಟ್ಟಿ ಅವರ ಹೆಸರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದ್ದು, ಶೀಘ್ರದಲ್ಲಿ ರಾಜ್ಯಪಾಲರಿಗೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಈ ಹಿಂದೆ ರಾಜ್ಯ ಸರ್ಕಾರ ಎರಡು ಬಾರಿ ನ್ಯಾ| ಎಸ್‌.ಆರ್‌. ನಾಯಕ್‌ ಅವರ ಹೆಸರನ್ನೇ ಶಿಫಾರಸು ಮಾಡಿತ್ತು. ಆದರೆ ರಾಜ್ಯಪಾಲರು ಇದಕ್ಕೆ ಒಪ್ಪಿಗೆ ನೀಡರಲಿಲ್ಲ. ಹೀಗಾಗಿ ಸರ್ಕಾರ ಈ ಬಾರಿ ನ್ಯಾ.ವಿಶ್ವನಾಥ್ ಶೆಟ್ಟಿ ಅವರನ್ನು ಹೆಸರನ್ನು ಶಿಫಾರಸು ಮಾಡಲು ಮುಂದಾಗಿದೆ.
ನ್ಯಾ. ಭಾಸ್ಕರ್‌ರಾವ್‌ ರಾಜೀನಾಮೆ ಬಳಿಕ ಕಳೆದ 13 ತಿಂಗಳಿಂದ ಖಾಲಿ ಇರುವ ಲೋಕಾಯುಕ್ತ ಹುದ್ದೆಗೆ ಮೊದಲು ನ್ಯಾ. ವಿಕ್ರಂಜಿತ್‌ಸೇನ್‌ ಹೆಸರು ಕೇಳಿ ಬಂದಿತ್ತು. ಆದರೆ, ಸ್ವತಃ ಸೇನ್‌ ಅವರೇ ಹುದ್ದೆಯನ್ನು ನಿರಾಕರಿಸಿದ್ದರು. ಬಳಿಕ ಕನ್ನಡಿಗರಾದ ಛತ್ತೀಸ್‌ಗಢ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್‌.ಆರ್‌. ನಾಯಕ್‌ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಆದರೆ, ನ್ಯಾ. ನಾಯಕ್‌ ವಿರುದ್ಧ ಸಹಕಾರ ಸಂಘಗಳ ನಿಯಮಗಳನ್ನು ಉಲ್ಲಂಸಿ ನಿವೇಶನ ಪಡೆದುಕೊಂಡ ಆರೋಪ ಕೇಳಿ ಬಂದಿದ್ದರಿಂದ ಹಾಗೂ ಪ್ರತಿಪಕ್ಷ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದರಿಂದ ರಾಜ್ಯಪಾಲರು ಎರಡು ಬಾರಿ ಅವರ ಹೆಸರಿನ ಶಿಫಾರಸನ್ನು ವಾಪಸ್‌ ಕಳಿಸಿದ್ದರು. 
SCROLL FOR NEXT