ನವದೆಹಲಿ: ಟಿವಿ ಪತ್ರಕರ್ತ ಅರ್ಣಬ್ ಗೋಸ್ವಾಮಿ ಪ್ರಾರಂಭಿಸಲಿರುವ 'ರಿಪಬ್ಲಿಕ್' ಸುದ್ದಿ ವಾಹಿನಿಯ ಹೆಸರಿನ ಬಗ್ಗೆ ಆಕ್ಷೇಪ ಎತ್ತಿರುವ ಬಿಜೆಪಿ ಸಂಸದ ಸುಬ್ರಮಣ್ಯನ್ ಸ್ವಾಮಿ ಖಾಸಗಿ ಸಂಸ್ಥೆಯ ಹೆಸರಿಗೆ ಈ ಪದ ಬಳಸುವುದು ಕಾನೂನು ಬಾಹಿರ ಎಂದಿದ್ದಾರೆ.
ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯಕ್ಕೆ ಪತ್ರ ಬರೆದಿರುವ ಸ್ವಾಮಿ, 'ರಿಪಬ್ಲಿಕ್' ಹೆಸರಿನಲ್ಲಿ ಪ್ರಾರಂಭಿಸಬೇಕೆಂದಿರುವ ಸುದ್ದಿವಾಹಿನಿಗೆ ಪರವಾನಗಿ ನೀಡುವುದು ಲಾಂಛನ ಮತ್ತು ಹೆಸರುಗಳ (ದುರ್ಬಳಕೆ ನಿಷೇಧ) ಕಾಯ್ದೆ ೧೯೫೦ನ್ನು ನೇರವಾಗಿ ಉಲ್ಲಂಘಿಸಿದಂತೆ ಮತ್ತು ಕಾನೂನಿಗೆ ವಿರುದ್ಧ ಎಂದಿದ್ದಾರೆ.
"ಈ ಕಾಯ್ದೆಯ ಪ್ರಕಾರ ಕೆಲವು ಲಾಂಛನಗಳನ್ನು ಮತ್ತು ಹೆಸರುಗಳನ್ನು ವೃತ್ತಿಗಾಗಿ ಅಥವಾ ವಾಣಿಜ್ಯ ಸಂಸ್ಥೆಗಳಿಗೆ ಬಳಕೆ ಮಾಡುವುದು ನಿಷಿದ್ಧ ಎಂದು ಗಮನಿಸಬಹುದು. 'ರಿಪಬ್ಲಿಕ್' ಪದವನ್ನು ಬಳಸುವಂತಿಲ್ಲ" ಎಂದು ಅವರು ಬರೆದಿರುವ ಪತ್ರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಸಚಿವಾಲಯ ಈ ಬಗ್ಗೆ ಗಮನ ಹರಿಸಬೇಕು ಎಂದು ಕೂಡ ಸ್ವಾಮಿ ಆಗ್ರಹಿಸಿದ್ದಾರೆ.
ಈ ವಿವಾದದ ಬಗ್ಗೆ ಕಾರ್ಯದರ್ಶಿ ಹಂತದ ಅಧಿಕಾರಿ ಪರಿಶೀಲಿಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಹಿಂದೆ ಟೈಮ್ಸ್ ನೌ ಸುದ್ದಿ ವಾಹಿನಿಯ ಸಂಪಾದಕ ಮುಖ್ಯಸ್ಥರಾಗಿದ್ದ ಅರ್ಣಬ್, ಡಿಸೆಂಬರ್ ೨೦೧೬ ರಲ್ಲಿ ಹೊಸ ಸುದ್ದಿವಾಹಿನಿ 'ರಿಪಬ್ಲಿಕ್' ಸ್ಥಾಪಿಸುತ್ತಿರುವುದಾಗಿ ಘೋಷಿಸಿದ್ದರು.