ಪ್ರಧಾನ ಸುದ್ದಿ

ಉಗ್ರ ದಾಳಿ ಆತಂಕದ ನಡುವೆಯೇ 68ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ಆರಂಭ!

Srinivasamurthy VN

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ 68ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಗೆ ಚಾಲನೆ ನೀಡಲಾಗಿದ್ದು, ಉಗ್ರ ದಾಳಿ ಆತಂಕದ ನಡುವೆಯೇ ಸಂಭ್ರಮಾಚರಣೆಯ ಕೇಂದ್ರ ಬಿಂದು ಪರೇಡ್ ಮತ್ತು ಸ್ಛಬ್ದ ಚಿತ್ರ ಮೆರಣಿಗೆಗೆ ಚಾಲನೆ ನೀಡಲಾಗಿದೆ.

ಮೆರಣಿಗೆಯಲ್ಲಿ ಸೇನೆಯ ಶಕ್ತಿ ಪ್ರದರ್ಶನ ಮಾಡಲಾಗುತ್ತಿದ್ದು, ಭಾರತೀಯ ಸೇನೆಯ ಮೂರೂ ದಳಗಳ ಯೋಧರು ತಮ್ಮ ಸಾಮರ್ಥ್ಯ ಪ್ರದರ್ಶನ ತೋರಲಿವೆ. ಇನ್ನು ಇದೇ ಮೊದಲ ಬಾರಿಗೆ ಎನ್ ಎಸ್ ಜಿ ಕಮಾಂಡೋ ಯೋಧರು  ಪರೇಡ್ ನಲ್ಲಿ ಪಾಲ್ಗೊಳ್ಳುತ್ತಿದ್ದು, ವಾಯುಸೇನೆಯ ಪರವಾಗಿ ಇದೇ ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನಗಳು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಲಿವೆ. ಇದಾದ ಬಳಿಕ ಪರೇಡ್ ನಲ್ಲಿ 17 ರಾಜ್ಯಗಳ  ಸಂಸ್ಕೃತಿ ಬಿಂಬಿಸುವ ಸ್ತಬ್ದಚಿತ್ರಗಳು ಮೆರವಣಿಗೆ ನಡೆಸಲಿದ್ದು, ಇದಲ್ಲದೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಬಿಂಬಿಸುವ ಸ್ಥಬ್ದ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

ಗಣರಾಜ್ಯೋತ್ಸವದ ವಿಶೇಷ ಅತಿಥಿಯಾಗಿ ಆಗಮಿಸಿರುವ ಅಬುಧಾಬಿಯ ಯುವರಾಜ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅವರು ಕೂಡ ದೆಹಲಿಯ ರಾಜ್ ಪಥ್ ಗೆ ಆಗಮಿಸಿದ್ದು, ಕೇಂದ್ರ ಸರ್ಕಾರದ ವಿವಿಧ ಅಧಿಕಾರಿಗಳು  ಯುವರಾಜನನ್ನು ಸ್ವಾಗತಿಸಿದ್ದಾರೆ. ಇದೇ ವೇಳೆ ವೀರಮರಣವನ್ನಪ್ಪಿದ ಭಾರತೀಯ ಹುತಾತ್ಮ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ವಂದನೆ ಸಲ್ಲಿಸಿದರು. ದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ಅಮರ್ ಜವಾನ್  ಜ್ಯೋತಿಗೆ ನಮನ ಸಲ್ಲಿಸುವ ಮೂಲಕ ಪ್ರಧಾನಿ ಮೋದಿ ಗೌರವ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೂರು ದಳದ ಸೇನಾ ಮುಖ್ಯಸ್ಥರು ಸಾಥ್ ನೀಡಿದರು.

ಇನ್ನು ಗಣರಾಜ್ಯೋತ್ಸವ ದಿನಾಚರಣೆ ಸಂಭ್ರಮಾಚರಣೆಯಲ್ಲಿ ಕೇಂದ್ರ ಸಚಿವರು, ಭಾರತೀಯ ಸೇನೆಯ ವಿವಿಧ ಗಣ್ಯರು ಹಾಗೂ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದಾರೆ.

SCROLL FOR NEXT