ನವದೆಹಲಿ: ಮುಂಬರುವ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇವಿಎಂ ಬದಲು ಮತ ಪತ್ರಕ್ಕೆ ಅವಕಾಶ ನೀಡಬೇಕು ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬೇಡಿಕೆ ಹಾಸ್ಯಸ್ಪದವಾಗಿದೆ ಎಂದು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರು ಬುಧವಾರ ಹೇಳಿದ್ದಾರೆ.
ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಅಭಿವೃದ್ಧಿಯತ್ತ ಸಾಗುತ್ತಿರುವಾಗ ನಾವು ಹಳೆ ಮತ ಪತ್ರ ಪದ್ದತಿ ಬೇಕು ಎನ್ನುವುದು...ಹಿಂದಕ್ಕೆ ಹೋದಂತೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ಇದೇ ವೇಳೆ, ಸದ್ಯ ಬಳಸುತ್ತಿರುವ ಇವಿಎಂಗಳನ್ನು ಬಿಟ್ಟು ಮತ ಎಣಿಕೆ ಮಾಡುವ ಇವಿಎಂಗಳನ್ನು ಬಳಸಬೇಕು. ಈಗೀರುವ ಮಷಿನ್ ಗಳಿಂದ ಯಾವ ಮತಗಟ್ಟೆಯಲ್ಲಿ ಯಾರೂ ಎಷ್ಟು ಮತ ಪಡೆದಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿಗಷ್ಟೇ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷದ ಸೋಲಿಗೆ ಇವಿಎಂ ಗಳೇ ಕಾರಣ, ಎಎಪಿ ಮತಗಳನ್ನು ಎಸ್ಎಡಿ-ಬಿಜೆಪಿ ಮೈತ್ರಿಕೂಟಕ್ಕೆ ವರ್ಗಾಯಿಸಲಾಗಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು. ಅಲ್ಲದೆ ಮುಂದಿನ ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಇವಿಎಂಗಳ ಬದಲಾಗಿ ಮತಪತ್ರ ಬಳಸುವಂತೆ ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.