ಮಾಜಿ ಆರ್ ಜೆ ಡಿ ಸಂಸದ ಶಹಾಬುದ್ದೀನ್
ನವದೆಹಲಿ: ಬಿಹಾರ ಮೂಲದ ಪತ್ರಕರ್ತ ರಾಜದೇವ್ ರಂಜನ್ ಅವರ ಕೊಲೆ ಪ್ರಕರಣದ ಸಂಬಂಧದಲ್ಲಿ ಮಾಜಿ ಆರ್ ಜೆ ಡಿ ಸಂಸದ ಮೊಹಮದ್ ಶಹಾಬುದ್ದೀನ್ ನನ್ನು ಸಿಬಿಐ ಸೋಮವಾರ ವಶಕ್ಕೆ ತೆಗೆದುಕೊಂಡಿರುವುದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಶಹಾಬುದ್ದೀನ್ ಸದ್ಯಕ್ಕೆ ತಿಹಾರ್ ಜೈಲಿನಲ್ಲಿ ಬಂಧಿತರಾಗಿದ್ದಾರೆ.
ಬಿಹಾರದ ಸಿವಾನ್ ಜಿಲ್ಲೆಯ ರಂಜನ್ ಕೊಲೆ ಆರೋಪದಲ್ಲಿ ಹೆಸರಿಸಲಾಗಿರುವ ೧೦ ಜನರಲ್ಲಿ ಶಹಾಬುದ್ದೀನ್ ಕೂಡ ಒಬ್ಬರು. ಸಾಕ್ಷ್ಯಾಧಾರಗಳನ್ನು ಸಿಬಿಐ ಕಲೆಹಾಕಿದ್ದು, ಶಹಾಬುದ್ದೀನ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸಿದ್ಧವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಕೊಲೆಯ ಹಿಂದೆ ಶಹಾಬುದ್ದೀನ್ ಇದ್ದಾರೆ ಎಂದು ಸಂತ್ರಸ್ತನ ಪತ್ನಿ ಆಶಾ ರಂಜನ್ ಮತ್ತು ತಂದೆ ರಾಧೇ ಕೃಷ್ಣ ಚೌಧರಿ ಹಲವು ಬಾರಿ ಆರೋಪಿಸಿದ ಮೇಲೆ ಈ ಪ್ರಕರಣವನ್ನು ಸೆಪ್ಟೆಂಬರ್ ನಲ್ಲಿ ಸಿಬಿಐ ತನಿಖೆಗೆ ನೀಡಲಾಗಿತ್ತು. ತನಿಖೆಯ ವೇಳೆಯಲ್ಲಿ ಅವನ ಸಹಚರರಾದ ಮೊಹಮದ್ ಕೈಫ್ ಮತ್ತು ಮೊಹಮದ್ ಜಾವೇದ್ ಅವರುಗಳ ಹೆಸರು ಮುನ್ನಲೆಗೆ ಬಂದದ್ದರಿಂದ ಶಹಾಬುದ್ದೀನ್ ಕೈವಾಡದ ಬಗ್ಗೆ ಸಂಶಯ ದಟ್ಟವಾಗಿತ್ತು.
ಜಾವೇದ್ ಮತ್ತು ಕೈಫ್ ಸದ್ಯಕ್ಕೆ ಜಾಮೀನಿನ ಮೇಲಿದ್ದು, ಶಹಾಬುದ್ದೀನ್ ಅವರನ್ನು ೧೦ ನೇ ಆರೋಪಿಯನ್ನಾಗಿಸಲಾಗಿದೆ.
ಈ ಮೊದಲು ಕೊಲೆಯ ತನಿಖೆ ಮಾಡಿದ್ದ ಬಿಹಾರದ ಪೊಲೀಸರು ಇದನ್ನು ಪೂರ್ವನಿಯೋಜಿತ ಕೊಲೆ ಎಂದು ಬಗೆದಿದ್ದರು.
ಸಿವಾನ್ ನಲ್ಲಿ ಹದಗೆಟ್ಟಿದ್ದ ಕಾನೂನು ಸುವ್ಯವಸ್ಥೆಯನ್ನು ವರದಿ ಮಾಡುತ್ತಿದ್ದ ಕೊಲೆಯಾದ ಪತ್ರಕರ್ತ ಈ ಅಪರಾಧಿಗಳಿಗೆ ಸಿಂಹಸ್ವಪ್ನವಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಮೇ ೧೩, ೨೦೧೬ ರಲ್ಲಿ ಪತ್ರಕರ್ತ, ಕಚೇರಿಯಿಂದ ಮನೆಗೆ ಹಿಂದಿರುಗುವಾಗ ಗುಂಡೇಟಿಗೆ ಬಲಿಯಾಗಿ ಕೊಲೆಯಾಗಿದ್ದರು. ಆ ಸಮಯದಲ್ಲಿ ಶಹಾಬುದ್ದೀನ್ ಜೈಲಿನಲ್ಲಿ ಬಂಧಿತರಾಗಿದ್ದರು.
ಅಪಹರಣ, ಕೊಲೆ ಇತ್ಯಾದಿಯಾಗಿ ೩೯ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಶಹಾಬುದ್ದೀನ್ ಅವರನ್ನು ಫೆಬ್ರವರಿ ೧೮ ರಂದು ತಿಹಾರ ಜೈಲಿಗೆ ಸ್ಥಳಾಂತರಿಸಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos