ತಿರುವನಂತಪುರಂ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಜಾನುವಾರು ಹತ್ಯೆ ಕಾನೂನನ್ನು ಕೇರಳದ ಆಡಳಿತ ಪಕ್ಷ ಮತ್ತು ಪ್ರಮುಖ ವಿರೋಧ ಪಕ್ಷ ವಿರೋಧಿಸಿವೆ. ಈ ವಿಚಾರವಾಗಿ ಸರ್ವ ಪಕ್ಷ ಸಭೆ ಕರೆಯಲು ಮುಂದಾಗಿರುವ ಸರ್ಕಾರ ಬುಧವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಈ ದಿನಾಂಕವನ್ನು ಗೊತ್ತುಮಾಡಲಾಗುವುದು ಎಂದು ಕೃಷಿ ಸಚಿವ ವಿ ಎಸ್ ಸುನಿಲ್ ಕುಮಾರ್ ಸೋಮವಾರ ಹೇಳಿದ್ದಾರೆ.
"ತಲತಲಾಂತರದಿಂದ ಪದ್ಧತಿಯಲ್ಲಿರುವ ಮತ್ತು ಅದನ್ನು ನಡೆಸಿಕೊಂಡು ಬಂದಿರುವ ರೈತರ ದೈನಂದಿಕ ಜೀವನದ ಪ್ರಶ್ನೆ ಇದು. ಇದನ್ನು ನಾವು ಸಂಪುಟ ಸಭೆಯಲ್ಲಿ ಚರ್ಚಿಸಲಿದ್ದೇವೆ ಮತ್ತು ಈ ಹೊಸ ಕಾನೂನಿನ ವಿರುದ್ಧ ನಾವು ಕಾನೂನು ಕ್ರಮ ತೆಗೆದುಕೊಂಡರೆ ಅಚ್ಚರಿಯೇನಿಲ್ಲ" ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.
ಈ ಹೊಸ ಕಾನೂನಿನ ವಿರುದ್ಧ ವ್ಯಾಪಕ ಪ್ರತಿಭಟನೆಗಳು ಕೇರಳದಲ್ಲಿ ಜರುಗಿವೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು, ಹೊಸ ಕಾನೂನಿನ ವಿರುದ್ಧ ಪ್ರತಿಭಟಿಸಿ ಸಾರ್ವಜನಿಕವಾಗಿ ಎತ್ತುಗಳು ತಲೆಕಡಿದ ಘಟನೆ ಕೂಡ ನಡೆದಿದೆ.
ಆಡಳಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ರಾಜ್ಯದಾದ್ಯಂತೆ ೩೦೦ ಕಡೆ ಗೋಮಾಂಸ ಉತ್ಸವ ನಡೆಸಿ ಉಚಿತವಾಗಿ ಬೀಫ್ ಖಾದ್ಯಗಳನ್ನು ನೀಡಿದೆ.
ಹೊಸ ಕಾನೂನನ್ನು ಕೇರಳದಲ್ಲಿ ಜಾರಿಗೆ ತರಲು ಸಾಧ್ಯವೇ ಇಲ್ಲ ಎಂದಿರುವ ಪಶು ಸಂಗೋಪನಾ ಸಚಿವ ಪಿ ರಾಜು "ಇದು ಹಾಸ್ಯಾಸ್ಪದ ಕಾನೂನು. ಕೇರಳದಲ್ಲಿ ಇದನ್ನು ಜಾರಿಗೆ ತರಲು ಸಾಧ್ಯವಿಲ್ಲ. ಇದನ್ನು ಬಗೆಹರಿಸಲು ಬೇರೆ ಮಾರ್ಗಗಳ ಬಗ್ಗೆ ನಾವು ಚಿಂತಿಸುತ್ತೇವೆ" ಎಂದು ರಾಜು ಸೋಮವಾರ ಹೇಳಿದ್ದಾರೆ.
ಜಾನುವಾರು ಹತ್ಯೆಯ ಬಗೆಗಿನ ಹೊಸ ಕಾನೂನಿಗೆ ಕೇರಳದಲ್ಲಿ ಬೆಂಬಲ ವ್ಯಕ್ತಪಡಿಸಿರುವ ಏಕೈಕ ಪಕ್ಷವಾಗಿ ಬಿಜೆಪಿ ಉಳಿದಿದೆ. "ಹೊಸ ಕಾನೂನನ್ನು ಇತರ ಪಕ್ಷಗಳು ತಪ್ಪಾಗಿ ಅರ್ಥ ಮಾಡಿಕೊಂಡಿವೆ" ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸುಂದರಂ ಹೇಳಿದ್ದಾರೆ.
ಈ ಪ್ರತಿಭಟನೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುವ ಘಟನೆಯಲ್ಲಿ ಕಣ್ಣೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕವಾಗಿ ಎತ್ತುಗಳ ತಲೆ ಕಡಿದಿದ್ದಾರೆ. ಈ ಘಟನೆಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡ ಖಂಡಿಸಿದ್ದರು. ನಾಲ್ವರು ಯುವ ಕಾರ್ಯಕರ್ತರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು ಕೂಡ. ಈಗ ಈ ಕಾರ್ಯಕರ್ತರ ವಿರುದ್ಧ ಪೊಲೀಸರು ಭಾನುವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಹೊಸ ಕಾನೂನನ್ನು ತೊಡೆದುಹಾಕಲು ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆಯಬೇಕು ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಎಂ ಎಂ ಹಸ್ಸನ್ ಹೇಳಿದ್ದಾರೆ. "ಕೇರಳ ಸರ್ಕಾರ ಹೊರ ತಂದಿರುವ ಜನವಿರೋಧಿ ಕಾನೂನನ್ನು ಪ್ರತಿಭಟಿಸಿ ಇಂದು ಕರಾಳ ದಿನವನ್ನು ನಾವು ಪರಿಗಣಿಸಿದ್ದೇವೆ. ಆದರೆ ಕಣ್ಣೂರಿನಲ್ಲಿ ನಡೆದ ಘಟನೆಯನ್ನು ನಾವು ಸಮರ್ಥಿಸಿಕೊಳ್ಳುವುದಲ್ಲ. ಆದುದರಿಂದ ಅವರನ್ನೆಲ್ಲ ಪಕ್ಷದಿಂದ ಉಚ್ಛಾಟಿಸಿದ್ದೇವೆ" ಎಂದು ಹಸ್ಸನ್ ಹೇಳಿದ್ದಾರೆ.