ಪ್ರವಾಸ-ವಾಹನ

ವಿಡಿಯೋ: ಭೋರ್ಗರೆಯುತ್ತಿರುವ ಜೋಗ ಜಲಪಾತದ ರುದ್ರರಮಣೀಯ ದೃಶ್ಯ ನೋಡಿ!

Srinivasamurthy VN
ಶಿವಮೊಗ್ಗ: ಕಾವೇರಿ, ಶರವಾತಿ ಸೇರಿದಂತೆ ವಿವಿಧ ನದಿಗಳು ಪಾತ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕರ್ನಾಟಕದ ಪ್ರವಾಸಿಗರ ನೆಚ್ಚಿನ ತಾಣ ಜೋಗಜಲಪಾತ ಭೋರ್ಗರೆಯುತ್ತಿದ್ದು, ಭಾರಿ ಪ್ರಮಾಣದ ನೀರು ಬೀಳುತ್ತಿರುವ ರುದ್ರರಮಣೀಯ ದೃಶ್ಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ದಕ್ಷಿಣ ಭಾರತದಲ್ಲಿ ಮುಂಗಾರು ಅಬ್ಬರ ಮುಂದುವರೆದಿದ್ದು, ಕೇರಳದಲ್ಲಿ ಅಬ್ಬರಿಸುತ್ತಿರುವ ಮುಂಗಾರು ಮಳೆ ಕರ್ನಾಟಕದ ಕರಾವಳಿಯಲ್ಲೂ ಅಬ್ಬರಿಸುತ್ತಿದೆ. ಪರಿಣಾಮ ಕರ್ನಾಟಕದ ಕಾವೇರಿ, ಶರಾವತಿ, ಕಪಿಲಾ ಸೇರಿದಂತೆ ವಿವಿಧ ನದಿಗಳಲ್ಲಿನ ನೀರಿನ ಪ್ರಮಾಣ ಹೆಚ್ಚಾಗಿದ್ದು, ಪ್ರಮುಖವಾಗಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಕೊಡಗು, ಭಾಗಮಂಡಲದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕಾವೇರಿ ಉಕ್ಕಿ ಹರಿಯುತ್ತಿದ್ದು, ಶಿವಮೊಗ್ಗ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ನದಿ ಉಕ್ಕಿ ಹರಿಯುತ್ತಿದೆ. 
ಕರ್ನಾಟಕದಲ್ಲಿ ಸುರಿಯುತ್ತಿರುವ ಭಾರಿ ಮಳೆ ಸುರಿಯುತ್ತಿರುವುದರಿಂದ ರಾಜ್ಯದ 14 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ, ಕೊಡಗು, ಮೈಸೂರು, ಮಂಡ್ಯ, ದಾವಣಗೆರೆ, ಚಾಮರಾಜನಗರ, ಬೆಳಗಾವಿ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಪ್ರಮುಖವಾಗಿ ಮಂಗಳೂರು, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಜನಜೀವನ ತೀವ್ರ ಅಸ್ತವ್ಯಸ್ಥಗೊಂಡಿದೆ. 
ಪ್ರಮುಖವಾಗಿ ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಪರಿಣಾಮ ಶರಾವತಿ, ಕಾವೇರಿ, ಕಪಿಲ ನದಿಗಳು ತುಂಬಿ ಹರಿಯುತ್ತಿವೆ. ಶ್ರೀರಂಗ ಪಟ್ಟಣ, ನಿಮಿಷಾಂಬ ದೇಗುಲ, ನಂಜನಗೂಡಿನಲ್ಲೂ ನದಿ ಉಕ್ಕಿ ಹರಿದಿದೆ. ಇನ್ನು ನಾಲ್ಕು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಲಿಂಗನಮಕ್ಕಿ ಜಲಾಶಯದಿಂದ ಗೇಟ್ ತೆರೆದು ಅಪಾರ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಕಪಿಲ ಮತ್ತು ಕಾವೇರಿ ನದಿ ಪ್ರವಾಹದಿಂದಾಗಿ ಅಪಾರ ಪ್ರಮಾಣದ ನೀರು ಡ್ಯಾಂಗಳಿಗೆ ಹರಿದು ಬರುತ್ತಿದ್ದು,  94 ಸಾವಿರ ಕ್ಯೂಸೆಕ್ಸ್ ನೀರನ್ನು ಡ್ಯಾಂ ನಿಂದ ಹೊರಗೆ ಬಿಡಲಾಗಿದೆ. ಸಾಗರ ತಾಲೂಕಿನ ಕರಗಾಲ್ ಗ್ರಾಮದಲ್ಲಿರುವ ಲಿಂಗನಮಕ್ಕಿ ಜಲಾಶಯದಿಂದ ನೀರು ಹರಿಯ ಬಿಡಲಾಗಿದ್ದು, ನಾಲ್ಕು ವರ್ಷಗಳಲ್ಲಿ ಇದೇ ಮೊದಲು. 1964ರಿಂದ ಈ ವರೆಗೂ ಡ್ಯಾಂನ ಗೇಟ್ ಗಳನ್ನು ಒಟ್ಟು 14 ಬಾರಿ ತೆರೆದು ನೀರು ಬಿಡಲಾಗಿದೆ. ಪರಿಣಾಮ ಜೋಗಜಲಪಾತ ಹಿಂದೆಂದೂ ಕಂಡರಿಯದ ರೀತಿಯಲ್ಲಿ ತುಂಬಿ ತುಳುಕುತ್ತಿದ್ದು, ಭಾರಿ ಪ್ರಮಾಣದ ನೀರು ಕೆಳಗೆ ಬೀಳುತ್ತಿದೆ. ಈ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ಜೋಗಜಲಪಾತದತ್ತ ಧಾವಿಸುತ್ತಿದ್ದಾರೆ.
SCROLL FOR NEXT