ದೋಹಾ: ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಒತ್ತು ನೀಡಿ ಭಾರತ- ಕತಾರ್ ಸಹಿ ಹಾಕಿರುವ ಒಪ್ಪಂದಗಳು ಭಯೋತ್ಪಾದಕರಿಗೆ ಸಿಗುತ್ತಿರುವ ಆರ್ಥಿಕ ನೆರವು ಹಾಗೂ ಅಕ್ರಮ ಹಣ ವಹಿವಾಟು( ಹವಾಲ) ಗಳಿಗೆ ಕಡಿವಾಣ ಹಾಕುವುದಕ್ಕೆ ಹೆಚ್ಚು ನೆರವಾಗಲಿವೆ.
ಮೇಕ್ ಇನ್ ಇಂಡಿಯಾ, ಕೃಷಿ ಸಂಸ್ಕರಣೆ, ಸೋಲಾರ್ ಶಕ್ತಿ ಕ್ಷೇತ್ರ, ಬಂಡವಾಳ ಹೂಡಿಕೆ ಹೊರತಾಗಿ ಭಯೋತ್ಪಾದನೆ ಹಾಗೂ ಹವಾಲ ಹಣ ನರೇಂದ್ರ ಮೋದಿ-ಕತಾರ್ ರಾಜಕುಮಾರ ಎಮಿರ್ ತಮಿಮ್ ಬಿನ್ ಹಮದ್ ಅಲ್ ತಾನಿ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯ ಪ್ರಧಾನ ಅಂಶಗಳಾಗಿದ್ದು, ಅಕ್ರಮ ಹಣ ವರ್ಗಾವಣೆ ಕುರಿತು ಗುಪ್ತಚರ ಮಾಹಿತಿ ಹಂಚಿಕೊಳ್ಳುವುದು ಸೇರಿದಂತೆಉಭಯ ರಾಷ್ಟ್ರಗಳು ಸಹಿ ಹಾಕಿರುವ ಒಪ್ಪಂದಗಳು ಭಯೋತ್ಪಾದನೆಗೆ ಸಿಗುತ್ತಿರುವ ಆರ್ಥಿಕ ನೆರವು ಹಾಗೂ ಹವಾಲ ಹಣಕ್ಕೆ ಕತ್ತರಿ ಹಾಕುವುದಕ್ಕೆ ಬಹುಪಾಲು ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಯೋತ್ಪಾದನೆಗೆ ಆರ್ಥಿಕ ನೆರವನ್ನು ನೀಡುತ್ತಿರುವವರನ್ನು ದೂರವಿಡುವುದರ ತುರ್ತು ಅಗತ್ಯತೆಯನ್ನು ಉಭಯ ನಾಯಕರು ಮನಗಂಡಿದ್ದು ಅಂತಹ ಎಲ್ಲಾ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒಮ್ಮತದ ತೀರ್ಮಾಕ್ಕೆ ಬಂದಿದ್ದಾರೆ.
ದ್ವಿಪಕ್ಷೀಯ ಮಾತುಕತೆ ವೇಳೆಯಲ್ಲಿ ಕತಾರ್- ಭಾರತದ ಸಂಬಂಧವನ್ನು ವ್ಯಾಪಾರ ವಹಿವಾಟಿಗೂ ಮೀರಿ ಬೆಳೆಸುವುದಕ್ಕೆ ಉಭಯ ನಾಯಕರೂ ಆಸಕ್ತಿ ತೋರಿದ್ದು, ಇದಕ್ಕಾಗಿ ಉನ್ನತ ಮಟ್ಟದ ಸಚಿವ ಸಮಿತಿಯನ್ನು ರಚಿಸುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಕತಾರ್ ಭಾರತಕ್ಕೆ ಎಲ್ ಎನ್ ಜಿ ಪೂರೈಕೆದಾರ ರಾಷ್ಟ್ರವಾಗಿರುವುದರಿಂದ ದ್ವಿಪಕ್ಷೀಯ ಮಾತುಕತೆ ವೇಳೆ ಇಂಧನ ಶಕ್ತಿ ಸಹಕಾರದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಹಾಗೂ ಕತಾರ್ ನಲ್ಲಿ ಈಗಾಗಲೇ ಪತ್ತೆ ಮಾಡಲಾಗಿರುವ ತೈಲ ಹಾಗೂ ಅನಿಲ ನಿಕ್ಷೇಪಗಳ ಅಭಿವೃದ್ಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.