ವಿದೇಶ

ಭಾರತೀಯ ನಾಗರಿಕ ಸೇವೆಗಳಿಗೆ ತುರ್ತಾಗಿ ಸುಧಾರಣೆಗಳ ಅಗತ್ಯವಿದೆ: ಅಮೆರಿಕ ಚಿಂತಕರ ಚಾವಡಿ

Srinivas Rao BV

ವಾಷಿಂಗ್ ಟನ್: ಭಾರತೀಯ ಆಡಳಿತ ಸೇವೆ ಸೇರಿದಂತೆ ನಾಗರಿಕ ಸೇವೆಗಳಿಗೆ ಸುಧಾರಣೆಗಳ ತುರ್ತು ಅಗತ್ಯವಿದೆ ಎಂದು ಅಮೆರಿಕ ಚಿಂತಕರ ಚಾವಡಿಯೊಂದು ಅಭಿಪ್ರಾಯಪಟ್ಟಿದೆ.

ಒಂದು ವೇಳೆ ಭಾರತದ ನಾಗರಿಕ ಸೇವೆಗಳಲ್ಲಿ ಸುಧಾರಣೆಯಾಗದೇ ಇದ್ದರೆ, ಸಾಂಸ್ಥಿಕ ಕುಸಿತದ ಅಪಾಯ ಎದುರಾಗಲಿದೆ ಎಂದು ಅಮೆರಿಕ ಮೂಲದ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಆಡಳಿತ ಸೇವೆ ರಾಜಕೀಯ  ಹಸ್ತಕ್ಷೇಪಕ್ಕೆ ಒಳಗಾಗಿರುವುದು ದುರದೃಷ್ಟಕರ ಎಂದು ಅಮೆರಿಕ ಚಿಂತಕರ ಚಾವಡಿಯ ಮಿಲನ್ ವೈಷ್ಣವ್ ಹಾಗೂ ಸಕ್ಷಮ ಖೋಸ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದ ನಾಗರಿಕ ಸೇವೆಗಳಲ್ಲಿ ರಾಜಕೀಯ ಹಸ್ತಕ್ಷೇಪ, ಸಿಬ್ಬಂದಿ ಕ್ರಮಗಳು ಬದಲಾಗಬೇಕಿದೆ ಎಂದು ಅಮೆರಿಕ ಚಿಂತಕರ ಚಾವಡಿಯ ಡಿ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ ಮೀಟ್ಸ್ ಬಿಗ್ ಡೇಟಾ ಎಂಬ 50 ಪುಟಗಳ ವರದಿಯಲ್ಲಿ ತಿಳಿಸಲಾಗಿದೆ.

ಭಾರತ ಸರ್ಕಾರ ಭಾರತದ ನಾಗರಿಕ ಸೇವೆಗಳ ನೇಮಕಾತಿ ಹಾಗೂ ಬಡ್ತಿ ಪ್ರಕ್ರಿಯೆಗಳಿಗೆ ಹೊಸ ರೂಪ ನೀಡಬೇಕಾದ ಅಗತ್ಯವಿದೆ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ. ಅತ್ಯುತ್ತಮ ಐಎಎಸ್ ಅಧಿಕಾರಿಗಳು ರಾಜಕೀಯ ಹಸ್ತಕ್ಷೇಪ ಎದುರಿಸುತ್ತಿದ್ದಾರೆ, ಆದರೆ ರಾಜಕೀಯ ನಿಷ್ಠೆಯನ್ನು ಪ್ರದರ್ಶಿಸುವ ಅಧಿಕಾರಿಗಳು ಆಯಕಟ್ಟಿನ ಸ್ಥಾನದಲ್ಲಿರುತ್ತಾರೆ. ಇದರಿಂದ ಅಧಿಕಾರಿಗಳ ಕಾರ್ಯಕ್ಷಮತೆ ಕುಸಿಯುತ್ತಿದೆ ಎಂದು ಹೇಳಲಾಗಿದೆ.

ಅಧಿಕಾರಿಗಳ ಕಾರ್ಯಕ್ಷಮತೆ ಉತ್ತಮಗೊಳ್ಳಬೇಕಾದರೆ ರಾಜಕೀಯ ಪ್ರೇರಿತ ವರ್ಗಾವಣೆಗಳನ್ನು ತಡೆಗಟ್ಟುವ ಕಾನೂನನ್ನು ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೆ ತರಬೇಕು. ಅಂತೆಯೇ ಕಾರ್ಯಕ್ಷಮತೆ ಪ್ರದರ್ಶಿಸದ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಅಮೆರಿಕ ಚಿಂತಕರ ಚಾವಡಿ ಸಲಹೆ ನೀಡಿದೆ.

SCROLL FOR NEXT