ಇಸ್ಲಾಮಾಬಾದ್: ಉಗ್ರ ಹಫೀಜ್ ಸಯೀದ್ ನನ್ನು ಗೃಹ ಬಂಧನದಲ್ಲಿರಿಸಿ, ಆತನ ವಿರುದ್ಧ ಭಯೋತ್ಪದನೆ ವಿರೋಧಿ ಕಾಯ್ದೆ(ಎಟಿಎ) ಜಾರಿಗೊಳಿಸಿದ್ದ ಪಾಕಿಸ್ತಾನ ಈಗ ಹಫೀಜ್ ಸಯೀದ್ ನಮ್ಮ ದೇಶಕ್ಕೇ ಅಪಾಯ ಎನ್ನಲು ಪ್ರಾರಂಭಿಸಿದೆ.
26/11 ರ ರೂವಾರಿ ಹಫೀಜ್ ಸಯೀದ್, ನಮ್ಮ ದೇಶಕ್ಕೆ ಅಪಾಯ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸೀಫ್ ಹೇಳಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಗೆ ಉಗ್ರ ಹಫೀಜ್ ಸಯೀದ್ ಮಾರಕವಾಗಿದ್ದಾನೆ ಎಂದು ಖಾವಾಜಾ ಆಸೀಫ್ ಒಪ್ಪಿಕೊಂಡಿದ್ದಾರೆ. ಆದರೆ ಪಾಕಿಸ್ತಾನ ರಕ್ಷಣಾ ಸಚಿವರ ಹೇಳಿಕೆಗೆ ಪಾಕಿಸ್ತಾನದ ಕೆಲವು ರಾಜಕೀಯ, ಧಾರ್ಮಿಕ ಮುಖಂಡರಿಂದ ವಿರೋಧ ವ್ಯಕ್ತವಾಗಿದ್ದು, ಹಫೀಜ್ ಸಯೀದ್ ನನ್ನು ಪಾಕಿಸ್ತಾನಕ್ಕೆ ಅಪಾಯ ಎಂದಿರುವ ಸಚಿವ ಭಾರತದ ಮುಖವಾಣಿ, ಭಾರತದ ಪರವಾಗಿರುವ ಸಚಿವ ಎಂದು ಆರೋಪಿಸಿದ್ದಾರೆ.
ಪ್ರತಿ ಬಾರಿ ಭಾರತ ಸಯೀದ್ ವಿರುದ್ಧ ಆರೋಪ ಮಾಡಿದಾಗಲೂ ಒಂದಲ್ಲಾ ಒಂದು ಕಾರಣ ನೀಡಿ ಅದನ್ನು ತಳ್ಳಿಹಾಕುತ್ತಿದ್ದ ಪಾಕಿಸ್ತಾನ ಈಗ ಉಗ್ರ ಹಫೀಜ್ ಸಯೀದ್ ವಿರುದ್ಧ ಭಯೋತ್ಪಾದನೆ ವಿರೋಧಿ ಕಾಯ್ದೆ ಜಾರಿಗೊಳಿಸಿದ್ದನ್ನು ಭಾರತ ಸ್ವಾಗತಿಸಿದ ಬೆನ್ನಲ್ಲೇ "ಹಫೀಜ್ ಸಯೀದ್ ನಮ್ಮ ದೇಶಕ್ಕೆ ಮಾರಕ" ಎನ್ನಲು ಪ್ರಾರಂಭಿಸಿದೆ.
ಭಯೋತ್ಪಾದನೆ ವಿರೋಧಿ ಕಾಯ್ದೆ ಜಾರಿಗೊಳಿಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಭಾರತ ಸರ್ಕಾರ, ಪಾಕಿಸ್ತಾನದ ಕ್ರಮವನ್ನು ಸ್ವಾಗತಿಸಿದ್ದು, ಜೊತೆಗೆ ಹಫೀಜ್ ಸಯೀದ್ ವಿರುದ್ಧ ಜಾಗತಿಕ ಕ್ರಮ ಕೈಗೊಳ್ಳುವಂತಾದರೆ ಅದು ಮುಂಬೈ ದಾಳಿಗೆ ನ್ಯಾಯ ಒದಗಿಸುವ ಪ್ರಕ್ರಿಯೆಯಲ್ಲಿ ಮೊದಲ ಹಂತವಾಗಿರಲಿದೆ ಎಂದು ಹೇಳಿತ್ತು.