ಬೀಜಿಂಗ್: ಭಾರತೀಯ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಫೆ.22 ರಂದು ಚೀನಾ ವಿದೇಶಾಂಗ ಸಚಿವರನ್ನು ಭೇಟಿ ಮಾಡಿ ಪ್ರಮುಖ ವಿಷಯಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಬೀಜಿಂಗ್ ನಲ್ಲಿ ಉಭಯ ದೇಶದ ಪ್ರತಿನಿಧಿಗಳು ಮಾತುಕತೆ ನಡೆಸಿದ್ದು, ಎನ್ಎಸ್ ಜಿ ಹಾಗೂ ಮಸೂದ್ ಅಜರ್ ಗೆ ನಿಷೇಧ ವಿಧಿಸುವ ಕುರಿತು ಮಹತ್ವದ ಮಾತುಕತೆ ನಡೆದಿರುವ ಸಾಧ್ಯತೆ ಇದೆ. ಚೀನಾ ವಿದೇಶಾಂಗ ಸಚಿವರನ್ನು ಭೇಟಿ ಮಾಡುವುದಕ್ಕೂ ಮುನ್ನ ಚೀನಾದ ವಿದೇಶಾಂಗ ಅಧಿಕಾರಿಗಳನ್ನು ಭೇಟಿ ಮಾಡಿ ಜೈಶಂಕರ್ ಮಾತುಕತೆ ನಡೆಸಿದ್ದರು.
ಮಸೂದ್ ಅಜರ್ ಗೆ ವಿಶ್ವಸಂಸ್ಥೆ ಮೂಲಕ ನಿಷೇಧ ವಿಧಿಸುವ ವಿಚಾರದ ಬಗ್ಗೆ ಭಾರತದೊಂದಿಗೆ ಚರ್ಚೆ ನಡೆಸುವುದಕ್ಕೂ ಮುನ್ನ ಚೀನಾ ಪ್ರತಿಕ್ರಿಯೆ ನೀಡಿದ್ದು, ಭಾರತದ ಪ್ರಸ್ತಾವನೆಯನ್ನು ಬೆಂಬಲಿಸಲು ಮತ್ತಷ್ಟು ಸ್ಪಷ್ಟ ಸಾಕ್ಷಾಧಾರಗಳು ಅಗತ್ಯವಿದೆ ಎಂದು ಇಂದಿನ ಮಾತುಕತೆ ನಡೆಯುವುದಕ್ಕೂ ಮುನ್ನವೇ ಚೀನಾ ಹೇಳಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಸೂದ್ ಅಜರ್ ಗೆ ನಿಷೇಧ ವಿಧಿಸುವ ಕುರಿತಾದ ಮಾತುಕತೆ ಕುತೂಹಲ ಮೂಡಿಸಿದೆ.