ಇಸ್ಲಾಮಾಬಾದ್: ಪಾಕಿಸ್ತಾನದ ಬಹವಾಲ್ಪುರದಲ್ಲಿ ನಡೆದ ಟ್ಯಾಂಕರ್ ಅಗ್ನಿ ದುರಂತ ಸಂಭವಿಸುವ ಮುನ್ನವೇ ಸಮೀಪದ ಮಸೀದಿಯೊಂದು ಅಪಾಯದ ಮುನ್ಸೂಚನೆ ನೀಡಿತ್ತು. ಆದರೆ ಅದನ್ನು ತಪ್ಪಾಗಿ ಪರಿಗಣಿಸಿದ ಜನ ಪೆಟ್ರೋಲ್ ಗಾಗಿ ಮುಗಿಬಿದಿದ್ದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನದ ಬಹವಾಲ್ಪರ ಹೆದ್ದಾರಿಯಲ್ಲಿ ಇಂದು ನಡೆದ ತೈಲ ಟ್ಯಾಂಕರ್ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 148ಕ್ಕೇರಿಕೆಯಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಇನ್ನೂ 50 ಮಂದಿಯ ಸ್ಥಿತಿ ಚಿಂತಾಜನಕವಲಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ದುರಂತಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಹವಾಲ್ಪುರ ಪೊಲೀಸ್ ಉಪಾಯುಕ್ತ ರಾಣಾ ಮಹಮದ್ ಸಲೀಂ ಅವರು, ಟ್ಯಾಂಕರ್ ಪಲ್ಟಿಯಾಗಿ ತೈಲ ಸೋರಿಕೆಯಾಗುತ್ತಿದ್ದಾಗ ಸ್ಥಳೀಯ ಮಸೀದಿಯೊಂದು ಸ್ಪೀಕರ್ ಮೂಲಕ ಸ್ಥಳೀಯರಿಗೆ ಎಚ್ಚರಿಕೆ ನೀಡಿತ್ತು. ಎಚ್ಚರಿಕೆಯನ್ನೇ ತಪ್ಪಾಗಿ ಗ್ರಹಿಸಿದ ಸ್ಥಳೀಯ ಜನರು ತೈಲಕ್ಕಾಗಿ ಟ್ಯಾಂಕರ್ ನತ್ತ ಮುಗಿಬಿದ್ದರು. ಕೈಗೆ ಸಿಕ್ಕ ಪಾತ್ರೆ, ಬಿಂದಿಗೆ ಮತ್ತು ಕ್ಯಾನ್ ಮತ್ತು ಡ್ರಂ ಗಳನ್ನು ತೆಗೆದುಕೊಂಡು ಹೋಗಿ ತೈಲ ಶೇಖರಣೆಗೆ ಮುಂದಾದರು.
ಈ ವೇಳೆ ಟ್ಯಾಂಕರ್ ಗೆ ಬೆಂಕಿ ಹೊತ್ತಿದ್ದು ಟ್ಯಾಂಕರ್ ಸ್ಫೋಟಗೊಂಡಿದೆ. ಟ್ಯಾಂಕರ್ ಅಗ್ನಿಗಾಹುತಿಯಾದ ಬಳಿಕವೂ ಕೂಡ ಅದೇ ಮಸೀದಿ ಟ್ಯಾಂಕರ್ ಗೆ ಬೆಂಕಿ ಹೊತ್ತಿದ್ದು, ಸಹಾಯಕ್ಕೆ ಧಾವಿಸಿ ಎಂದು ಗ್ರಾಮಸ್ಥರಿಗೆ ಕರೆ ನೀಡಿತ್ತು. ಮಸೀದಿಯಿಂದ ಹೊರಬಿದ್ದ ಘೋಷಣೆಯಿಂದಾಗಿಯೇ ಹೈವೇಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಇನ್ನು ಬೆಂಕಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಬಹುಶಃ ಅಲ್ಲಿ ನೆರೆದಿದ್ದ ಗ್ರಾಮಸ್ಥರ ಬಳಿ ಇದ್ದಿರಬಹುದಾದ ಬೆಂಕಿಪೊಟ್ಟಣದಂತಹ ವಸ್ತುಗಳು ಬೆಂಕಿ ಹೊತ್ತಲು ಕಾರಣವಾಗಿರಬಹುದು. ಆದರೆ ತನಿಖೆ ಬಳಿಕವಷ್ಟೇ ನಿಖರ ಮಾಹಿತಿ ನೀಡಲು ಸಾಧ್ಯ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.