ಢಾಕಾ: ಮಯನ್ಮಾರ್ ಸೇನಾ ಕಾರ್ಯಾಚರಣೆ ಹಿನ್ನಲೆಯಲ್ಲಿ ಬಾಂಗ್ಲಾದೇಶದಲ್ಲಿನ ನಿರಾಶ್ರಿತ ಶಿಬಿರಗಳಲ್ಲಿ ರೊಹಿಂಗ್ಯಾ ಮುಸ್ಲಿಮರ ಸಂಖ್ಯೆ ದಿನೇ ದಿನೇ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಸಂತಾನಹರಣ ಯೋಜನೆ ಜಾರಿಗೆ ನಿರ್ಧರಿಸಿದೆ.
ಮೂಲಗಳ ಪ್ರಕಾರ ಪ್ರಸ್ತುತ ಬಾಂಗ್ಲಾದೇಶದ ವಿವಿಧ ನಿರಾಶ್ರಿತ ಶಿಬಿರಗಳಿಗೆ ಈಗಾಗಲೇ ಸುಮಾರು 6 ಲಕ್ಷಕ್ಕೂ ಅಧಿಕ ರೊಹಿಂಗ್ಯ ಮುಸ್ಲಿಂ ನಿರಾಶ್ರಿತರು ವಲಸೆ ಬಂದಿದ್ದು, ದಿನೇ ದಿನೇ ಈ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಬರುತ್ತಿದೆ. ಹೀಗಾಗಿ ನಿರಾಶ್ರಿತ ಶಿಬಿರಗಳಲ್ಲಿ ಉಳಿಯಲು ಸ್ಥಳಾವಕಾಶವಿಲ್ಲದೇ ಅಲ್ಲಿನ ಜನರು ಪರದಾಡುವಂತಾಗಿದೆ. ಇದು ಬಾಂಗ್ಲಾದೇಶ ಸರ್ಕಾರಕ್ಕೆ ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಶಿಬಿರಗಳಲ್ಲಿರುವ ನಿರಾಶ್ರಿತರಿಗೆ ಆಹಾರ, ಬಟ್ಟೆ ಮತ್ತು ಇತರೆ ಮೂಲಭೂತ ಸೌಕರ್ಯ ನೀಡಲು ಸಾಧ್ಯವಾಗುತ್ತಿಲ್ಲ. ಪ್ರಮುಖವಾಗಿ ನಿರಾಶ್ರಿತರಿಗಾಗಿ ಮೀಸಲಿಟ್ಟಿದ್ದ ವೈದ್ಯಕೀಯ ಪರಿಕರಗಳ ಕೊರತೆ ಕೂಡ ಉಂಟಾಗಿದೆ.
ಪ್ರಸ್ತುತ ರೊಹಿಂಗ್ಯ ನಿರಾಶ್ರಿತ ಶಿಬಿರಗಳಲ್ಲಿರುವ ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಇದೇ ಕಾರಣಕ್ಕೆ ಅಲ್ಲಿನ ಸರ್ಕಾರ ರೊಹಿಂಗ್ಯಾ ನಿರಾಶ್ರಿತ ಶಿಬಿರಗಳಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಯೋಜನೆ ಮೂಲಕ ರೊಹಿಂಗ್ಯ ಮುಸ್ಲಿಮರ ಸಂಖ್ಯೆಯನ್ನು ಇಳಿಕೆ ಮಾಡಲು ಮುಂದಾಗಿದೆ. ಇದಕ್ಕಾಗಿ ಕಾಕ್ಸ್ ಬಜಾರ್ ನಲ್ಲಿರುವ ರೊಹಿಂಗ್ಯಾ ಮುಸ್ಲಿಮರ ನಿರಾಶ್ರಿತ ಶಿಬಿರಗಳಲ್ಲಿ ಬಾಂಗ್ಲಾ ಸರ್ಕಾರ ಪಿಂಟುಕಾಂತಿ ಭಟ್ಟಾಚಾರ್ಜೀ ನೇತೃತ್ವದಲ್ಲಿ ಸಂತಾಹರಣ ಯೋಜನೆ ರೂಪಿಸಿದೆ.
ಇದಕ್ಕೂ ಮೊದಲು ಇಲ್ಲಿನ ಸ್ಥಳೀಯ ಜಿಲ್ಲಾಡಳಿತ ಗರ್ಭ ನಿರೋಧಕಗಳ ಮೂಲಕ ಇಲ್ಲಿನ ಜನಸಂಖ್ಯೆ ನಿಯಂತ್ರಣಕ್ಕೆ ಪ್ರಯತ್ನಿಸಿತ್ತು. ಶಿಬಿರದಲ್ಲಿ ಸುಮಾರು 549 ಗರ್ಭ ನಿರೋದಕ ಪ್ಯಾಕೆಟ್ ಗಳನ್ನು ವಿತರಣೆ ಮಾಡಿತ್ತು. ಆದರೆ ಈ ಯೋಜನೆ ಮೂಲಕ ನಿರೀಕ್ಷಿತ ಫಲಿತಾಂಶ ದೊರೆಯದೇ ಇದ್ದುದರಿಂದ ಬಾಂಗ್ಲಾ ಸರ್ಕಾರ ಈಗ ನೇರ ಸಂತಾನಹರಣ ಯೋಜನೆಗೆ ಮುಂದಾಗಿದೆ ಎಂದು ಹೇಳಲಾಗಿದೆ. ಅದರನ್ವಯ ನಿರಾಶ್ರಿತ ಶಿಬಿರದಲ್ಲಿರುವ ಪುರುಷರಿಗೆ ವಸೆಕ್ಟೊಮಿ ಮತ್ತು ಮಹಿಳೆಯರಿಗೆ ಟ್ಯುಬೆಕ್ಟೊಮಿ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿದೆ ಎಂದು ಯೋಜನೆಯ ನೇತೃತ್ವ ವಹಿಸಿರುವ ಪಿಂಟುಕಾಂತಿ ಭಟ್ಟಾಚಾರ್ಜೀ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos