ಇಸ್ಲಾಮಾಬಾದ್: ಪಾಕಿಸ್ತಾನ ಜೈಲಿನಲ್ಲಿ ಬಂಧಿಯಾಗಿರುವ ಭಾರತೀಯ ನಾಗರಿಕ ಕುಲಭೂಷಣ್ ಜಾಧವ್ ವಿರುದ್ಧ "ಪಬಲ ಸಾಕ್ಷಿ" ಹೊಂದಿದ್ದೇವೆ. ಅಂತರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ದಲ್ಲಿ ಆತನ ವಿರುದ್ಧದ ಪ್ರಕರಣವನ್ನು ಗೆಲ್ಲುವ ಭರವಸೆ ಇದೆ ಎಂದು ಪಾಕಿಸ್ತಾನದ ನೂತನ ವಿದೇಶಾಂಗ ಸಚಿವ ಶಾಹ್ ಮೊಹಮದ್ ಖುರೇಶಿ ಹೇಳಿದ್ದಾರೆ.
47 ವರ್ಷದ ಜಾಧವ್ ನನ್ನು ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನ ಬಂಧಿಸಿದ್ದು ವಿಚಾರಣೆ ನಡೆಸಿದ್ದ ಪಾಕ್ ಮಿಲಿಟರಿ ನ್ಯಾಯಾಲಯವು ಏಪ್ರಿಲ್ 2017 ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದೆ.
ಪಾಕ್ ನ ಈ ತೀರ್ಪು ವಿರೋಧಿಸಿದ್ದ ಭಾರತ ಸರ್ಕಾರ ಮೇ 2017 ರಲ್ಲಿ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ಅರ್ಜಿ ಸ್ವೀಕರಿಸಿದ ಐಸಿಜೆ ಜಾಧವ್ ಮರಣದಂಡನೆ ತೀರ್ಪಿಗೆ ತಡೆ ನೀಡಿತ್ತು.
ಜಾಧವ್ ಪ್ರಕರಣಕ್ಕೆ ಸಂಬಂಧಿಸಿ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳು ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ತಮ್ಮ ಮನವಿಯ ವಿವರಗಳನ್ನು ಇದಾಗಲೇ ಸಲ್ಲಿಸಿದೆ.
ಇದೀಗ ಪಾಕ್ ನಲ್ಲಿ ರಚನೆಯಾಗಿರುವ ನೂತನ ಸರ್ಕಾರದ ವಿದೇಶಾಂಗ ಸಚಿವರು ಈ ಸಂಬಂಧ ಹೇಳಿಕೆ ನೀಡಿದ್ದು "ನಾವು ಜಾದವ್ ವಿರುದ್ಧ ಬಲವಾದ ಸಾಕ್ಷ್ಯವನ್ನು ಹೊಂದಿದ್ದೇವೆ ಮತ್ತು ಐಸಿಜೆ ನಲ್ಲಿ ನಾವು ಈ ಪ್ರಕರಣವನ್ನು ಗೆಲ್ಲುವ ಭರವಸೆ ಹೊಂದಿದ್ದೇವೆ" ಎಂದಿದ್ದಾರೆ.
"ನಮ್ಮ ನಿಲುವನ್ನು ಐಸಿಜೆಗೆ ಪರಿಣಾಮಕಾರಿ ರೀತಿಯಲ್ಲಿ ಪ್ರಸ್ತುತಪಡಿಸಲು ನಾವು ಪ್ರಯತ್ನಿಸಿದ್ದೇವೆ" ಎಂದು ಖುರೇಷಿ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಮುಂದಿನ ವರ್ಷ ಫೆಬ್ರವರಿಯಲ್ಲಿ ಜಾಧವ್ ಪ್ರಕರಣದ ವಿಚಾರಣೆ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ನಡೆಯಲಿದೆ ಎಂದು ಜಿಯೋ ಟಿವಿ ಮೂಲಗಳು ಬುಧವಾರ ಪ್ರಸಾರ ಮಾಡಿದ ಸುದ್ದಿಯಲ್ಲಿ ಬಿತ್ತರಿವೆ.
2016 ಮಾರ್ಚ್ ನಲ್ಲಿ ಜಾಧವ್ ಇರಾನ್ ಕಡೆಯಿಂದ ಪಾಕ್ ನ ಬಲೂಚಿಸ್ತಾನ ಪ್ರಾಂತ್ಯ ಪ್ರವೇಶಿಸಿದಾಗ ಪಾಕಿಸ್ತಾನ ತನ್ನ ಭದ್ರತಾ ಪಡೆಗಳು ಅವರನ್ನು ಬಂಧಿಸಿದ್ದವು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos