ಲಾಹೋರ್: ಮುಂಬೈ ದಾಳಿ ರೂವಾರಿ, ಜೆಯುಡಿ ಸಂಘಟನೆಯ ಮುಖ್ಯಸ್ಥ ಉಗ್ರ ಹಫೀಜ್ ಸಯೀದ್ ನನ್ನು ಪ್ರಸ್ತುತ ಬಂಧಿಸಬಾರದು ಎಂದು ಲಾಹೋರ್ ಹೈಕೋರ್ಟ್ ಪಾಕಿಸ್ತಾನ ಸರ್ಕಾರಕ್ಕೆ ಸೂಚನೆ ನೀಡಿದೆ.
ಹಫೀಜ್ ಸಯ್ಯೀದ್ ಹಾಗೂ ಆತನ ಸಂಘಟನೆಗಳ ಮೇಲೆ ವಿಶ್ವಸಂಸ್ಥೆ ಹೇರಿದ ನಿರ್ಬಂಧಗಳನ್ನು ಅನುಷ್ಠಾನಕ್ಕೆ ತಂದಿಲ್ಲ ಎಂದು ಭಾರತ ಹಾಗೂ ಅಮೆರಿಕ ದೇಶಗಳು ಪಾಕಿಸ್ತಾನದ ವಿರುದ್ಧ ದೂರುತ್ತಿರುವ ಹಿನ್ನಲೆಯಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಲು ವಿಶ್ವಸಂಸ್ಥೆಯ ನಿರ್ಬಂಧ ಸಮಿತಿಯ ಮೇಲ್ವಿಚಾರಣಾ ತಂಡವು ಗುರುವಾರ ಭೇಟಿ ನೀಡುತ್ತಿದ್ದು, ಈ ಕಾರಣಕ್ಕೆಮಾರ್ಚ್ 17ರವರೆಗೆ ಹಫೀಜ್ ನನ್ನು ಬಂಧಿಸಬಾರದು ಎಂದು ಲಾಹೋರ್ ಹೈಕೋರ್ಟ್ ಹೇಳಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧ ಸಮಿತಿಯ ಮೇಲ್ವಿಚಾರಣಾ ತಂಡವು ಗುರುವಾರ (ಜನವರಿ 25) ಇಸ್ಲಾಮಾಬಾದ್ ಗೆ ಭೇಟಿ ನೀಡುತ್ತಿದ್ದು, ವಿಶ್ವಸಂಸ್ಥೆಯ ನಿರ್ಬಂಧಗಳನ್ನು ಪಾಕಿಸ್ತಾನ ಅನುಸರಿಸುತ್ತಿದೆಯೇ ಎಂದು ಪರಿಶೀಲನೆ ನಡೆಸಲಿದೆ.
2008ರ ಡಿಸೆಂಬರ್ ನಲ್ಲಿ ಹಫೀಜ್ ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ '1267 ನಿರ್ಬಂಧ'ಗಳ ಪಟ್ಟಿಗೆ ಸೇರಿಸಿತ್ತು. ಪಾಕಿಸ್ತಾನದ ನಿಷೇಧಿತ ಸಂಘಟನೆಗಳ ಕುರಿತ ಪರಿಶೀಲನೆಗೆ ಈ ತಂಡ ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲಿ ತನ್ನನ್ನು ಬಂಧಿಸದಂತೆ ಆದೇಶಿಸುವಂತೆ ಕೋರಿ ಹಫೀಜ್ ಕೋರ್ಟ್ ಮೊರೆ ಹೋಗಿದ್ದ. ‘ಮುಂಬೈ ದಾಳಿಗೆ ತಾನೇ ಕಾರಣ ಎಂದು ಭಾರತ ಮತ್ತು ಅಮೆರಿಕ ಪರಿಗಣಿಸಿದ್ದು, ಇದೇ ಕಾರಣಕ್ಕೆ ತನ್ನನ್ನು ಉಗ್ರ ಪಟ್ಟಿಗೆ ಸೇರಿಸಲಾಗಿದೆ. ಆದ್ದರಿಂದ ಯಾವುದೇ ಸಂದರ್ಭದಲ್ಲಿ ನನ್ನನ್ನು ಬಂಧಿಸುವ ಸಾಧ್ಯತೆ ಇದೆ’ ಎಂದು ಹಫೀಜ್ ಕೋರ್ಟ್ಗೆ ಹೇಳಿದ್ದ. ಆತನ ಮನವಿಯನ್ನು ನ್ಯಾಯಮೂರ್ತಿ ಅಮೀನ್ ಅಮಿನುದ್ದೀನ್ ಖಾನ್ ಮಾನ್ಯ ಮಾಡಿದ್ದು, ಪ್ರಸ್ತುತ ಆತನ ಬಂಧನಕ್ಕೆ ಬ್ರೇಕ್ ಹಾಕಿದೆ.