ಲಂಡನ್ : ವಿವಿಧ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಲಂಡನ್ ನಲ್ಲಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಹಸ್ತಾಂತರ ಪ್ರಕರಣದ ವಿಚಾರಣೆ ವೆಸ್ಟ್ ಮಿನಿಸ್ಟರ್ ಕೋರ್ಟ್ ನಲ್ಲಿ ಇಂದು ನಡೆಯುತ್ತಿದೆ.
ವೆಸ್ಟ್ ಮಿನಿಸ್ಟರ್ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಇಂದು ನಡೆಯುವ ವಿಚಾರಣೆಯಲ್ಲಿ ಚರ್ಚೆಗಳನ್ನು ಮುಕ್ತಾಯಗೊಳಿಸುವ ಸಾಧ್ಯತೆ ಇದೆ.
ನ್ಯಾಯಾಲಯ ಪ್ರವೇಶಿಸುವ ಮುನ್ನಾ ಮಾತನಾಡಿದ ವಿಜಯ್ ಮಲ್ಯ , ತಮ್ಮ ವಿರುದ್ಧದ ಅಕ್ರಮ ಹಣ ವರ್ಗಾವಣೆ ಹಾಗೂ ಕಳ್ಳತನ ಆರೋಪ ಸಂಪೂರ್ಣ ಸುಳ್ಳಿನಿಂದ ಕೂಡಿದೆ ಎಂದರು.
ಬ್ಯಾಂಕುಗಳಿಗೆ 9 ಸಾವಿರ ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಭಾರತಕ್ಕೆ ಹಸ್ತಾಂತರ ಪ್ರಕರಣದಲ್ಲಿ ಮಾಜಿ ಕಿಂಗ್ ಪಿಶರ್ ಏರ್ ಲೈನ್ಸ್ ಮುಖ್ಯಸ್ಥರು ಕಾನೂನು ಹೋರಾಟ ನಡೆಸುತ್ತಿದ್ದಾರೆ.
62 ವರ್ಷದ ಮದ್ಯ ದೊರೆ ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಬಂಧನಕ್ಕೊಳಗಾದ ನಂತರ ಹಸ್ತಾಂತರ ಪ್ರಕರಣದಲ್ಲಿ ವಾರೆಂಟ್ ನಲ್ಲಿ ಜಾಮೀನು ಪಡೆದುಕೊಂಡಿದ್ದು, ವಿದೇಶದಲ್ಲಿದ್ದುಕೊಂಡೆ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಸಿಬಿಐ ಎಲ್ಲಾ ದಾಖಲೆಗಳನ್ನು ಲಂಡನ್ ನ್ಯಾಯಾಲಯಕ್ಕೆ ಸಲ್ಲಿಸಿದೆ. ಮಾಜಿ ಐಡಿಬಿಐ ಬ್ಯಾಂಕು ಉಪ ವ್ಯವಸ್ಥಾಪಕ ನಿರ್ದೇಶಕ ಬಿಕೆ ಪಾತ್ರ ವಿರುದ್ಧ ಪಿತೂರಿ ಪ್ರಕರಣ ಸೇರಿದಂತೆ ಎಲ್ಲಾ ವಿಚಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ನಷ್ಟದಲ್ಲಿದ್ದ ಕಿಂಗ್ ಪಿಶರ್ ಏರ್ ಲೈನ್ಸ್ ಗಾಗಿ ಕೆಲ ಪ್ರಕ್ರಿಯೆಗಳನ್ನು ಉಲ್ಲಂಘಿಸಿ ಮಲ್ಯ ಸಾಲ ಪಡೆದುಕೊಂಡಿದ್ದಾರೆ ಎಂದು ತನಿಖಾ ದಳ ಹೇಳಿದೆ.
ವಿಜಯ್ ಮಲ್ಯ ಹಸ್ತಾಂತರ ಪ್ರಕರಣದಲ್ಲಿ ಒಂದು ವೇಳೆ ನ್ಯಾಯಾಧೀಶರು ಭಾರತದ ಪರವಾಗಿ ತೀರ್ಪು ನೀಡಿದ್ದರೆ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರ ಆದೇಶಕ್ಕೆ ಲಂಡನ್ ಗೃಹ ಕಾರ್ಯದರ್ಶಿ ಸಹಿ ಹಾಕಲು ಎರಡು ತಿಂಗಳು ಬೇಕಾಗುತ್ತದೆ.
ಆದಾಗ್ಯೂ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪಿನ ವಿರುದ್ಧ ಉನ್ನತ ನ್ಯಾಯಾಂಗಕ್ಕೆ ಮೇಲ್ಮನವಿ ಸಲ್ಲಿಸಲು ಇಬ್ಬರಿಗೂ ಅವಕಾಶವಿದೆ.
ಒಂದು ವೇಳೆ ಮಲ್ಯ ಅವರನ್ನು ಲಂಡನ್ ನಿಂದ ಹಸ್ತಾಂತರಿಸಿದ್ದರೆ ಅವರನ್ನು ಮುಂಬೈಯ ಅರ್ಥರ್ ರಸ್ತೆಯಲ್ಲಿರುವ ಕಾರಾಗೃಹದಲ್ಲಿಡುವ ಸಾಧ್ಯತೆ ಇದೆ. ಈ ಕಾರಾಗೃಹದ ಪೋಟೋಗಳನ್ನು ಲಂಡನ್ ಮೂಲದ ಕಾರಾಗೃಹ ತಜ್ಞ ಡಾ. ಅಲನ್ ಮಿಚ್ಚೆಲ್ ಇಟ್ಟುಕೊಂಡಿದ್ದು,ಈ ದಾಖಲೆಗಳನ್ನು ಮಲ್ಯ ರಕ್ಷಣಾ ತಂಡ ನ್ಯಾಯಾಲಯಕ್ಕೆ ಸಲಿಸಲಿದೆ ಎನ್ನಲಾಗುತ್ತಿದೆ.
ಮಾರ್ಚ್ 2016 ರಿಂದಲೂ ವಿಜಯ್ ಮಲ್ಯ ಲಂಡನ್ ನಲ್ಲಿದ್ದು, ಸಿಬಿಐ ಹಾಗೂ ಇಡಿ ತಮ್ಮ ವಿರುದ್ಧ ಸುಳ್ಳಿನ ಆರೋಪ ಮಾಡುತ್ತಿವೆ. ತನ್ನ ಬಳಿ ಇರುವ ಆಸ್ತಿ ಮಾರಾಟ ಮಾಡಿ ಬ್ಯಾಂಕುಗಳಿಗೆ ಸಾಲ ಹಿಂದಿರುಗಿಸುವುದಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos