ವಿದೇಶ

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಕಾಶ್ಮೀರ ವಿವಾದ ಪ್ರಸ್ತಾಪ: ಭಾರತ ಆಕ್ಷೇಪ

Sumana Upadhyaya

ಯುನೈಟೆಡ್ ನೇಷನ್ಸ್: ಕಾಶ್ಮೀರ ವಿವಾದವನ್ನು ಪಾಕಿಸ್ತಾನ, ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಎತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಭಾರತ, ಸಂಕುಚಿತ ರಾಜಕೀಯ ಲಾಭ ಪಡೆದುಕೊಳ್ಳಲು ಯಾವುದೇ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುವುದು ಪಾಕಿಸ್ತಾನದ ಅಭ್ಯಾಸವಾಗಿದೆ. ರಾಷ್ಟ್ರದ ಪ್ರಾದೇಶಿಕ ಸಮಗ್ರತೆಯನ್ನು ದುರ್ಬಲಗೊಳಿಸಲು ಸ್ವ ನಿರ್ಣಯದ ಹಕ್ಕನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

ವಿಶ್ವಸಂಸ್ಥೆಗೆ ಭಾರತದ ಖಾಯಂ ನಿಯೋಗದ ಮೊದಲ ಕಾರ್ಯದರ್ಶಿ ಪಲೋಮಿ ತ್ರಿಪಾಠಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ರಾಯಭಾರಿ ಮಲೀಹಾ ಲೊದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಿದ್ದರು. ಸ್ವನಿರ್ಣಯದ ಹುಕ್ಕುಗಳಿಗೆ ಕಾಶ್ಮೀರಿ ಜನತೆಯ ಹೋರಾಟವನ್ನು ದಶಕಗಳಿಂದ ಹತ್ತಿಕ್ಕಲಾಗುತ್ತಿದೆ ಎಂದರು.

ವಿಶ್ವಸಂಸ್ಥೆಯ ಆಶ್ರಯದಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ವಿವರಿಸಿದ ಮಾದರಿಗಳ ಪ್ರಕಾರ ಕಾಶ್ಮೀರಿ ಜನರಿಗೆ ತಮ್ಮ ಆಶಯಗಳನ್ನು ಮುಕ್ತವಾಗಿ ಹೇಳಿಕೊಳ್ಳುವ ಸಮಯ ಬರುವವರೆಗೆ ಕಾಶ್ಮೀರ ವಿವಾದ ವಿಶ್ವಸಂಸ್ಥೆಯ ಅಜೆಂಡಾದಲ್ಲಿ ಉಳಿಯಲಿದೆ ಎಂದಿದ್ದಾರೆ.

ಭಾರತದ ಆಂತರಿಕ ಭಾಗವಾಗಿರುವ ಜಮ್ಮು-ಕಾಶ್ಮೀರದ ಸ್ಥಿತಿಗತಿ ಬಗ್ಗೆ ಒಂದು ನಿಯೋಗ ಮಾಡಿರುವ ಅನಧಿಕೃತ ಉಲ್ಲೇಖವನ್ನು ನಾವು ತಿರಸ್ಕರಿಸುತ್ತೇವೆ ಎಂಗು ತ್ರಿಪಾಠಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಮೂರನೇ ಸಮಿತಿ ಸಭೆಯಲ್ಲಿ ನಿನ್ನೆ ಹೇಳಿದ್ದಾರೆ.

ಸಂಕುಚಿತ ರಾಜಕೀಯ ಲಾಭಕ್ಕಾಗಿ ಯಾವುದೇ ವೇದಿಕೆಯನ್ನು ದುರುಪಯೋಗ ಮಾಡುವುದು ಪಾಕಿಸ್ತಾನದ ಅಭ್ಯಾಸವಾಗಿಬಿಟ್ಟಿದೆ. ನಮ್ಮ ಗಡಿ ಭಾಗದಲ್ಲಿ ಭಯೋತ್ಪಾದನೆಯಂತಹ ಕುಕೃತ್ಯಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು ಭಾರತದ ಗಡಿಭಾಗದ ಜನರು ಪ್ರತಿನಿತ್ಯ ತೊಂದರೆಯಿಂದ ಬಳಲುತ್ತಿದ್ದಾರೆ ಎಂದರು.
ವಸಾಹತು ವಿಮೋಚನೆ ಹಂತದಲ್ಲಿರುವ 17 ಸ್ವಯಂ ಆಡಳಿತವಿಲ್ಲದ ಪ್ರದೇಶಗಳಿದ್ದು ಇವುಗಳ ಸಮಸ್ಯೆಗಳನ್ನು ಬಗೆಹರಿಸಲು ಅಂತಾರಾಷ್ಟ್ರೀಯ ಸಮುದಾಯ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

SCROLL FOR NEXT