ಯುವತಿ ನುಸ್ರತ್ ಜಹಾನ್ ರಫಿ ಹತ್ಯೆ ಖಂಡಿಸಿ ಬಾಂಗ್ಲಾ ಮಹಿಳೆಯರ ಪ್ರತಿಭಟನೆ
ಢಾಕಾ; ತನಗೆ ಶಾಲೆಯ ಮುಖ್ಯೋಪಾಧ್ಯಾಯ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರು ನೀಡಿದ ಯುವತಿಯನ್ನು ಬೆಂಕಿಯಿಂದ ಸುಟ್ಟು ಕೊಂದುಹಾಕಿದ ಬೆಚ್ಚಿಬೀಳಿಸುವ ಘಟನೆ ಮುಸ್ಲಿಂ ರಾಷ್ಟ್ರ ಬಾಂಗ್ಲಾದೇಶದಲ್ಲಿ ನಡೆದಿದೆ.
19 ವರ್ಷದ ನುಸ್ರತ್ ಜಹಾನ್ ರಫಿಯ ಸಾವು ಕಳೆದ ವಾರ ದಕ್ಷಿಣ ಏಷ್ಯಾದಲ್ಲಿ ವ್ಯಾಪಕ ಖಂಡನೆಗೆ ಕಾರಣವಾಗಿತ್ತು. ಸಾವಿನ ಹಿಂದೆ ಭಾಗಿಯಾದ ಎಲ್ಲರನ್ನೂ ಶಿಕ್ಷಿಸುವುದಾಗಿ ಪ್ರಧಾನ ಮಂತ್ರಿ ಭರವಸೆ ನೀಡಿದ್ದರು.
ತನ್ನ ವಿರುದ್ಧ ಪೊಲೀಸರಿಗೆ ನೀಡಿದ್ದ ಲೈಂಗಿಕ ಕಿರುಕುಳ ದೂರನ್ನು ಹಿಂತೆಗೆದುಕೊಳ್ಳುವಂತೆ ನುಸ್ರತ್ ರಫಿ ವಿರುದ್ಧ ಶಿಕ್ಷಕ ಮತ್ತು ಆತನ ಬೆಂಬಲಿಗರು ಒತ್ತಡ ಹೇರಿದ್ದರು. ಆದರೆ ನುಸ್ರತ್ ನಿರಾಕರಿಸಿದಾಗ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟುಹಾಕಲಾಗಿದೆ.
ಘಟನೆಗೆ ಸಂಬಂಧಪಟ್ಟಂತೆ ಇಂದು ಬಂದಿತರಾಗಿರುವ 17 ಮಂದಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಪ್ರಾಂಶುಪಾಲರ ಆದೇಶದ ಮೇರೆಗೆ ಆಕೆಯನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ನುಸ್ರತ್ ರಫಿ ಕೇಸನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಬೇಕೆಂದು, ನಿರಾಕರಿಸಿದರೆ ಕೊಂದು ಹಾಕುವಂತೆ ಮುಖ್ಯ ಶಿಕ್ಷಕ ತನ್ನ ಬೆಂಬಲಿಗರಿಗೆ ಆದೇಶ ನೀಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ಮೊಹಮ್ಮದ್ ಇಕ್ಬಾಲ್ ತಿಳಿಸಿದ್ದಾರೆ.
ಮದರಸಾದಲ್ಲಿ ಕಲಿಯುತ್ತಿದ್ದ ನುಸ್ರತ್ ಜಹಾನ್ ರಫಿ ಎಂಬ 19 ವರ್ಷದ ಯುವತಿ, ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ದೂರು ನೀಡಿದ್ದಳು. ದುರ್ದೈವ ಎಂದರೆ ಸಂತ್ರಸ್ತ ಹುಡುಗಿಯ ನೆರವಿಗೆ ಬರಬೇಕಾದವರು, ಮದರಸಾದ ಘನತೆಗೆ ಧಕ್ಕೆ ತಂದಿದ್ದಾಳೆ ಎಂದು ಸೀಮೆಯೆಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ. ಈ ಘಟನೆ ಧರ್ಮದ ಕಪಿಮುಷ್ಠಿಯಲ್ಲಿ ನಲುಗುತ್ತಿರುವ ಬಾಂಗ್ಲಾದೇಶದಂತಹ ರಾಷ್ಟ್ರಗಳಲ್ಲಿ ಹೆಣ್ಣಿನ ದಯನೀಯ ಸ್ಥಿತಿಯನ್ನು ಜಗತ್ತಿಗೆ ಸಾರುತ್ತಿದೆ.
ಕಳೆದ ಮಾರ್ಚ್ 27ರಂದು ವಿದ್ಯಾರ್ಥಿಯನ್ನು ಕಚೇರಿಗೆ ಕರೆಸಿಕೊಂಡ ಹೆಡ್ಮಾಸ್ಟರ್ ಲೈಂಗಿಕ ಕಿರುಕುಳ ನೀಡಿದ್ದಾನೆ. ಮುಂದಿನ ಅನಾಹುತವನ್ನು ಅರಿತ ವಿದ್ಯಾರ್ಥಿನಿ ಆತನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾಳೆ. ಮದರಸಾದಲ್ಲಿ ನಡೆದ ಘಟನೆಯನ್ನು ಪೋಷಕರಿಗೆ ವಿವರಿಸಿದ್ದಾಳೆ. ಹತ್ತಿರದ ಪೊಲೀಸ್ ಠಾಣೆಗೆ ಪೋಷಕರ ಸಮೇತ ಹೋಗಿ ಹೆಡ್ಮಾಸ್ಟರ್ ವಿರುದ್ಧ ದೂರು ನೀಡಲು ಯತ್ನಿಸಿದ್ದಾಳೆ. ದೂರು ದಾಖಲಿಸಿಕೊಳ್ಳದ ಪೊಲೀಸರು ಆಕೆಯ ವಿರುದ್ಧವೇ ದೌರ್ಜನ್ಯ ನಡೆಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos