ಇಸ್ಲಾಮಾಬಾದ್: ಕುಲಭೂಷಣ್ ಜಾಧವ್ ಗೆ ರಾಜತಾಂತ್ರಿಕ ನೆರವು ನೀಡುವುದರ ಕುರಿತು ಪಾಕಿಸ್ತಾನ ಮೌನ ವಹಿಸಿದೆ.
ಭಾರತದ ನಿವೃತ್ತ ನೌಕಾದಳದ ಅಧಿಕಾರಿ ಜಾಧವ್ ನ್ನು ಭೇಟಿ ಮಾಡುವುದಕ್ಕೆ ಭಾರತೀಯ ಅಧಿಕಾರಿಗಳಿಗೆ ಅವಕಾಶ ನೀಡುವುದಾಗಿ ಹೇಳಿದ್ದ ಪಾಕಿಸ್ತಾನ ಮರು ದಿನವೇ ಈ ಕುರಿತಂತೆ ಮೌನಕ್ಕೆ ಶರಣಾಗಿದೆ. ಜು.17 ರಂದು ಅಂತಾರಾಷ್ಟ್ರೀಯ ನ್ಯಾಯಾಲಯ ಜಾಧವ್ ಗೆ ತುರ್ತಾಗಿ ರಾಜತಾಂತ್ರಿಕ ನೆರವು ನೀಡುವಂತೆ ಆದೇಶಿಸಿತ್ತು.
ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನವನ್ನು ಜಾಧವ್ ಗೆ ಕೌನ್ಸೆಲರ್ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿತ್ತು. ತೀರ್ಪು ಬಂದ ಎರಡು ವಾರಗಳ ನಂತರ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನ ವಿದೇಶಾಂಗ ಕಚೇರಿ ರಾಜತಾಂತ್ರಿಕ ನೆರವು ನೀಡುವುದಾಗಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದೊಂದಿಗೆ ಸಂವಹನ ನಡೆಸಿದ್ದ ಭಾರತ, ಜಾಧವ್ ಗೆ ಯಾವುದೇ ಅಡ್ಡಿಯಿಲ್ಲದ ರಾಜತಾಂತ್ರಿಕ ನೆರವನ್ನು ನೀಡಬೇಕೆಂದು ಹೇಳಿತ್ತು. ಭಾರತದ ಸಂದೇಶ ರವಾನೆಯಾಗುತ್ತಿದ್ದಂತೆಯೇ ಪಾಕ್ ಮೌನ ವಹಿಸಿದೆ. ಅಷ್ಟೇ ಅಲ್ಲದೇ ಇತ್ತೀಚಿನ ವರದಿಗಳ ಪ್ರಕಾರ ರಾಜತಾಂತ್ರಿಕ ನೆರವು ನೀಡುವುದಕ್ಕೆ ಪಾಕಿಸ್ತಾನ ಕೆಲವು ಷರತ್ತುಗಳನ್ನು ವಿಧಿಸಿದೆ ಎಂದು ತಿಳಿದುಬಂದಿದೆ. ಈ ಪೈಕಿ ಜಾಧವ್ ನ್ನು ಭಾರತದ ಅಧಿಕಾರಿಗಳು ಭೇಟಿ ಮಾಡಿದಾಗ ಅವರೊಂದಿಗೆ ಪಾಕ್ ಅಧಿಕಾರಿಗಳೂ ಇರಬೇಕೆಂಬುದು ಷರತ್ತುಗಳಲ್ಲಿ ಒಂದು ಅಂಶವಾಗಿದೆ.