ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಸ್ಫೋಟ ನಡೆಸಿ 44 ಯೋಧರ ಸಾವಿಗೆ ಕಾರಣವಾದ ಪಾಪಿ ಪಾಕಿಸ್ತಾನಕ್ಕೆ ತನ್ನದೇ ಕೃತ್ಯದ ಪರಿಚಯವಾಗಿದ್ದು, ಅಲ್ಲಿನ ಸೇನೆ ಮೇಲೆ ಭಯೋತ್ಪಾದಕರು ಆತ್ಮಹತ್ಯಾ ದಾಳಿ ನಡೆಸಿದ್ದಾರೆ.
ಬಲೂಚಿಸ್ಥಾನದಲ್ಲಿ ಪಾಕಿಸ್ತಾನ ಸೇನೆಯ ವಾಹನ ತೆರಳುತ್ತಿದ್ದಾಗ ಈ ಸ್ಫೋಟ ನಡೆದಿದ್ದು, ಘಟನೆಯಲ್ಲಿ 9 ಜನರು ಮೃತಪಟ್ಟಿದ್ದರೆ 11 ಜನರು ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ ಬಲೂಚಿಸ್ಥಾನ ಪೋಸ್ಟ್ ನಲ್ಲಿ ಬಲೋಚ್ ರಾಜಿ ಅಜೋಯ್ ಸಂಗರ್ (ಬಿಆರ್ ಎಎಸ್) ಉಗ್ರ ಕೃತ್ಯಕ್ಕೆ ಹೊಣೆ ಹೊತ್ತುಕೊಂಡಿದೆ. ಬಲೂಚಿಸ್ಥಾನ ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಯನ್ನು ವಿರೋಧಿಸುತ್ತಿದ್ದು, ಕಾರಿಡಾರ್ ಮಾರ್ಗದಲ್ಲೇ ಬಲೂಚಿಸ್ಥಾನದ ಸಂಘಟನೆ ಆತ್ಮಹತ್ಯಾ ದಾಳಿ ನಡೆಸಿದೆ.
ಸೌದಿ ಅರೇಬಿಯಾ ರಾಜ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಪಾಕಿಸ್ತಾನಕ್ಕೆ ಆಗಮಿಸಿರುವ ಸಂದರ್ಭದಲ್ಲೇ ಬಲೂಚಿಸ್ಥಾನ ಸಂಘಟನೆ ಈ ದಾಳಿ ನಡೆಸಿದ್ದು ಮಹತ್ವ ಪಡೆದುಕೊಂಡಿದೆ. ಬಿಆರ್ ಎಎಸ್ ಸಂಘಟನೆ ಬಲೂಚಿಸ್ಥಾನ ವಿಮೋಚನೆಗಾಗಿ ಹೋರಾಡುತ್ತಿರುವ ಸಂಘಟನೆಗಳ ಭಾಗವಾಗಿದೆ.
ನಮ್ಮ ಹೋರಾಟಗಾರರು ಗಸ್ತು ತಿರುಗುತ್ತಿದ್ದ ಪಾಕಿಸ್ತಾನ ಭದ್ರತಾ ಪಡೆಗಳ ಮೇಲೆ ಹಾಗೂ ಕ್ಯಾಂಪ್ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿದ್ದಾರೆ ಪಂಜುಗರ್ ಹಾಗೂ ತುರ್ಬಾಟ್ ನಡುವೆ ಇರುವ ಸಿಪಿಇಸಿ ಮಾರ್ಗದಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಬಿಆರ್ ಎಎಸ್ ವಕ್ತಾರ ಬಲೂಚ್ ಖಾನ್ ಹೇಳಿದ್ದಾರೆ.