ವಿದೇಶ

'ಮುಂಬೈ ಉಗ್ರ ದಾಳಿಗೂ ನನಗೂ ಸಂಬಂಧವಿಲ್ಲ': ತನ್ನ ಮೇಲಿನ ಆರೋಪಗಳ ಪ್ರಶ್ನಿಸಿದ ಉಗ್ರ ಹಫೀಜ್ ಸೈಯ್ಯೀದ್

Srinivasamurthy VN
ಲಾಹೋರ್: ಮುಂಬೈ ಉಗ್ರ ದಾಳಿಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ, ಅಷ್ಟು ಮಾತ್ರವಲ್ಲ.. ಭಾರತದಲ್ಲಿ ನಡೆದ ಯಾವುದೇ ಉಗ್ರ ಕೃತ್ಯದಲ್ಲೂ ನಾನು ಭಾಗಿಯಾಗಿಲ್ಲ ಎಂದು ಜಮಾತ್ ಉದ್ ದವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀದ್ ಸಯೀದ್‌ ಹೇಳಿದ್ದಾನೆ.
ಈ ಹಿಂದೆ ಪಾಕಿಸ್ತಾನ ಸರ್ಕಾರ ಉಗ್ರ ಹಫೀಜ್ ಸಯ್ಯೀದ್ ವಿರುದ್ಧ ದಾಖಲಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿನ್ನೆ ಲಾಹೋರ್ ಹೈಕೋರ್ಟ್‌ಗೆ ತನ್ನ ಸಹಚರರೊಂದಿಗೆ ಆಗಮಿಸಿ ಅರ್ಜಿ ಸಲ್ಲಿಸಿ ಹೇಳಿಕೆ ನೀಡಿರುವ ಕುಖ್ಯಾತ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯ್ಯೀದ್, 'ಮುಂಬೈ ಮೇಲೆ ನವೆಂಬರ್ 2008ರಂದು ನಡೆದ ಉಗ್ರರ ದಾಳಿ ಸೇರಿದಂತೆ ಭಾರತದ ನೆಲದಲ್ಲಿ ನಡೆದ ಯಾವುದೇ ಭಯೋತ್ಪಾದನಾ ಚಟುವಟಿಕೆಯಲ್ಲಿ ನನ್ನ ಪಾತ್ರ ಇಲ್ಲ ಎಂದು ಹೇಳಿದ್ದಾನೆ. ಅಲ್ಲದೆ ತನ್ನ ವಿರುದ್ಧ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭಯೋತ್ಪಾದನಾ ನಿಗ್ರಹ ದಳ ಸಿದ್ಧಪಡಿಸಿರುವ ಎಫ್‌ಐಆರ್ ವಜಾ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾನೆ.
ತಮಗೆ ಲಷ್ಕರ್ ಇ ತೊಯ್ಬಾ ಮತ್ತು ಅಲ್ ಖೈದಾ ಮತ್ತು ಅವುಗಳನ್ನು ರೀತಿಯ ಯಾವುದೇ ಸಂಘಟನೆಗಳ ಜೊತೆಗೆ ಯಾವುದೇ ಸಂಬಂಧವಿಲ್ಲ. ದೇಶ ವಿರೋಧಿ ಚಟುವಟಿಕೆಗಳಲ್ಲಿ ನಾವು ಪಾಲ್ಗೊಂಡಿಲ್ಲ. ಮುಂಬೈ ಉಗ್ರ ದಾಳಿ ಪ್ರಕರಣದಲ್ಲಿ ಹಫೀಜ್ ಸಯೀದ್ ವಿರುದ್ಧ ಭಾರತ ಮಾಡಿರುವ ಆರೋಪಗಳಿಗೆ ಯಾವುದೇ ಆಧಾರವಿಲ್ಲ.‌ ಅದು ಸತ್ಯಕ್ಕೆ ದೂರವಾದುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. 
ಪಂಜಾಬ್ ನ ಭಯೋತ್ಪಾದನಾ ನಿಗ್ರಹ ದಳವು ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಆತನ ಸಹಚರರ ವಿರುದ್ಧ ಒಟ್ಟು 23 ಪ್ರಕರಣಗಳನ್ನು ದಾಖಲಿಸಿತ್ತು. ಶಂಕಿತ ಉಗ್ರರಿಗೆ ತಮ್ಮ ಟ್ರಸ್ಟ್ ಮತ್ತು ಮದರಸಾಗಳ ಮೂಲಕ ಹಣ ಸಂಗ್ರಹಿಸಿ ಕೊಡುತ್ತಿದ್ದಾರೆ ಎಂಬ ಆರೋಪಗಳನ್ನು ಹೊರಿಸಲಾಗಿತ್ತು. ಜಮಾತ್ ಉಲ್ ದವಾ, ಲಷ್ಕರ್ ಎ ತಯ್ಯಬಾ ಮತ್ತು ಫಲಾಹ್ ಇ ಇನ್ಸಾನಿಯತ್ ಸಂಘಟನೆಗಳ ಮೇಲೆ ವಿಶ್ವಸಂಸ್ಥೆಯು ನಿಷೇಧ ಹೇರಿ, ಶಿಸ್ತುಕ್ರಮ ಜರುಗಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ಸೂಚಿಸಿದ ಮೇಲೆ ಅಲ್ಲಿನ ಸರ್ಕಾರ ತನಿಖೆಗೆ ಮುಂದಾಗಿತ್ತು. 
SCROLL FOR NEXT