ದುಬೈ: ಪುಲ್ವಾಮ ಉಗ್ರ ದಾಳಿಯ ನಂತರ ಭಾರತ - ಪಾಕಿಸ್ತಾನ ಸಂಬಂಧ ಮತ್ತಷ್ಟು ಹದಗೆಟ್ಟಿದ್ದು, ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣವಾಗಿರುವ ಹೊತ್ತಲ್ಲೇ ಭಾರತೀಯ ಉದ್ಯಮಿಯೊಬ್ಬರು ಪಾಕಿಸ್ತಾನದ ಆಗ್ನೇಯ ಸಿಂಧ್ ಪ್ರಾಂತ್ಯದಲ್ಲಿ 60 ಹ್ಯಾಂಡ್ ಪಂಪ್ ಗಳನ್ನು ಸ್ಥಾಪಿಸುವ ಮೂಲಕ ಗಮನ ಸೆಳೆದಿದ್ದಾರೆ.
ಮಾಧ್ಯಮಗಳ ವರದಿಯ ಪ್ರಕಾರ, ಕಳೆದ ಮೂರು ದಶಕಗಳಿಂದ ದುಬೈನಲ್ಲಿ ನೆಲಸಿರುವ ಭಾರತೀಯ ಉದ್ಯಮಿ ಜೋಗಿಂದರ್ ಸಿಂಗ್ ಸಲಾರಿಯಾ ಅವರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ತೀರಾ ಹಿಂದುಳಿದ ಜಿಲ್ಲೆಯೊಂದರಲ್ಲಿ 60 ಕ್ಕೂ ಹೆಚ್ಚು ಹ್ಯಾಂಡ್ ಪಂಪ್ಗಳನ್ನು ಸ್ಥಾಪಿಸಿದ್ದಾರೆ.
ಥಾರ್ಪರ್ಕರ್ ಜಿಲ್ಲೆಯಲ್ಲಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ಸಹಾಯ ಪಡೆದು ಈ ಕಾರ್ಯ ಮಾಡಿದ್ದಾರೆ. ಜಿಲ್ಲೆಯಲ್ಲಿ ತಾಂಡವವಾಡುತ್ತಿದ್ದ ಸಮಸ್ಯೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದ ಸಿಂಗ್ ಅಲ್ಲಿನ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ.
ಜೋಗಿಂದರ್ 1993 ರಿಂದ ದುಬೈನಲ್ಲಿ ವಾಸವಿದ್ದು, ಟ್ರಾನ್ಸ್ಪೋರ್ಟ್ ಉದ್ಯಮ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ಯೂಟ್ಯೂಬ್ ಮೂಲಕ ಥಾರ್ಪರ್ಕರ್ ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ಅರಿತಿದ್ದಾರೆ. ಬಳಿಕ ಅಲ್ಲಿನ ಸಾಮಾಜಿಕ ಕಾರ್ಯಕರ್ತರ ಸಹಾಯ ಪಡೆದು 60 ಕ್ಕೂ ಹೆಚ್ಚು ಹ್ಯಾಂಡ್ ಪಂಪ್ಗಳನ್ನು ಹಾಕಿಸಿ, ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಿದ್ದಾರೆ.
ಪುಲ್ವಾಮಾ ಉಗ್ರ ದಾಳಿಯ ನಂತರ ಭಾರತ-ಪಾಕಿಸ್ತಾನದ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಅದೇ ಸಂದರ್ಭದಲ್ಲೇ ನಾವು ಪಾಕಿಸ್ತಾನದ ತೀರಾ ಹಿಂದುಳಿದ ಹಳ್ಳಿಗಳಲ್ಲಿ ಹ್ಯಾಂಡ್ ಪಂಪ್ಗಳನ್ನು ಸ್ಥಾಪಿಸಿದ್ದೆವು ಎಂದು ಸಿಂಗ್ ಹೇಳಿರುವುದಾಗಿ ಖಲೀಜ್ ಟೈಮ್ಸ್ ವರದಿ ಮಾಡಿದೆ.