ಇಸ್ಲಾಮಾಬಾದ್: ಪುಲ್ವಾಮ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಸಂಸ್ಥಾಪಕ ಮಸೂಗ್ ಅಜರ್ ನನ್ನು ಬೆಂಬಲಿಸುವ ಭರದಲ್ಲಿ ಪಾಕಿಸ್ತಾನದ ಪತ್ರಕರ್ತನೋರ್ವ ಬೌದ್ಧಗುರು ದಲೈಲಾಮರನ್ನು ಉಗ್ರಗಾಮಿ ಎಂದು ಕರೆದು ಸಾಮಾಜಿಕ ಜಾಲತಾಣಗಳಲ್ಲಿ ಉಗಿಸಿಕೊಳ್ಳುತ್ತಿದ್ದಾನೆ.
ಹೌದು.. ಅತ್ತ ವಿಶ್ವಸಂಸ್ಥೆಯಲ್ಲಿ ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಭಾರತದ ಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿದ್ದು, ಇದನ್ನು ಪಾಕಿಸ್ತಾನದ ಪತ್ರಕರ್ತನೋರ್ವ ಬೆಂಬಲಿಸಿದ್ದಾನೆ. ಅಲ್ಲದೆ ಉಗ್ರ ಮಸೂದ್ ಅಜರ್ ಗೆ ಬೆಂಬಲ ನೀಡುವ ಮತ್ತು ಆತನ ದುಷ್ಕತ್ಯಗಳನ್ನು ಬೆಂಬಲಿಸುವ ಭರದಲ್ಲಿ ಖ್ಯಾತ ಬೌದ್ಧ ಧಾರ್ಮಿಕ ಗುರು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ದಲೈಲಾಮರನ್ನು ಉಗ್ರಗಾಮಿ ಎಂದು ಟೀಕಿಸಿದ್ದಾನೆ.
ಪಾಕಿಸ್ತಾನದ ಹಿರಿಯ ಪತ್ರಕರ್ತ ಹಮೀದ್ ಮೀರ್ ಇಂತಹುದೊಂದು ದುಷ್ಕೃತ್ಯಕ್ಕೆ ಕೈ ಹಾಕಿದ್ದು, ಟ್ವೀಟರ್ ನಲ್ಲಿ ಸಿಡ್ನಿ ಮಾರ್ನಿಂಗ್ ಪ್ರಕಟಿಸಿದ್ದ ಹಳೆಯ ವರದಿಯೊಂದನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾನೆ. ಮಸೂದ್ ಅಜರ್ ವಿರುದ್ಧದ ಭಾರತದ ನಿರ್ಧಾರವನ್ನೇಕೆ ಚೀನಾ ತಡೆದಿದೆ ಎಂಬುದನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಏಕೆಂದರೆ ಭಾರತ ಟಿಬೆಟ್ ನಲ್ಲಿ ಅಶಾಂತಿಗೆ ಕಾರಣವಾಗಿರುವ ದಲೈಲಾಮ ಎಂಬ ಉಗ್ರಗಾಮಿಗೆ ಶೆಲ್ಟರ್ ನೀಡಿದೆ. ಇದೇ ಕಾರಣಕ್ಕೆ ಭಾರತದ ನಡೆಯನ್ನು ಚೀನಾ ವಿರೋಧಿಸಿದೆ ಎಂದು ಟ್ವೀಟ್ ಮಾಡಿದ್ದಾನೆ.
ಹಮೀದ್ ಮೀರ್ ಟ್ವೀಟ್ ಗೆ ಇದೀಗ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ದಲೈಲಾಮರನ್ನು ಉಗ್ರಗಾಮಿ ಎಂದ ಪಾಕಿಸ್ತಾನದ ಪತ್ರಕರ್ತ ಹಮೀದ್ ಮೀರ್ ನನ್ನು ಟ್ವೀಟಿಗರು ವ್ಯಾಪಕ ತರಾಟೆಗೆ ತೆಗೆದುಕೊಂಡಿದ್ದಾರೆ.
ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ದಲೈಲಾಮರನ್ನು ಉಗ್ರಗಾಮಿ ಎಂದು ಕರೆಯುವ ಮೂಲಕ ಪಾಕಿಸ್ತಾನದ ಪತ್ರಕರ್ತರನ್ನು ತಮ್ಮ ಬುದ್ಧಿಮಟ್ಟದ ಪ್ರದರ್ಶನ ಮಾಡಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ.