ವಿದೇಶ

ಚಂದ್ರಯಾನ-2 ಹಿನ್ನಡೆ: ಭಾರತದ ಕಾಲೆಳೆದ ಪಾಕ್!

Manjula VN

ಭಾರತವನ್ನು ಲೇವಡಿ ಮಾಡುವ ಸಲುವಾಗಿಯೇ ಇಡೀ ರಾತ್ರಿ ಎಚ್ಚರವಿದ್ದ ಪಾಕ್ ಸಚಿವ

ಇಸ್ಲಾಮಾಬಾದ್: ಭಾರತದ ಗೆಲುವು, ಯಶಸ್ಸನ್ನು ಸಹಿಸದ ಪಾಕಿಸ್ತಾನ ಸದಾಕಾಲ ಭಾರತದ ಕಾಲೆಳೆಯಲು ಹವಣಿಸುತ್ತಿರುತ್ತದೆ. ಸದಾಕಾಲ ಭಾರತವನ್ನು ಲೇವಡಿ ಮಾಡಲು ತುದಿಗಾಲಲ್ಲಿ ನಿಂತಿರುವ ಪಾಕಿಸ್ತಾನ ಇದೀಗ ಮತ್ತೆ ತನ್ನ ದುರ್ಬುದ್ಧಿಯನ್ನು ಮುಂದುವರೆಸಿದೆ. 

ಚಂದ್ರಯಾನ-2 ಕಾರ್ಯಾಚರಣೆಯನ್ನು ರಾತ್ರಿ ಇಡೀ ನಿದ್ರೆಗೆಟ್ಟು ನೋಡಿರುವ ಪಾಕಿಸ್ತಾನ, ಹಿನ್ನಡೆಯಾಗುತ್ತಿದ್ದಂತೆಯೇ ಲೇವಡಿ ಮಾಡಲು ಆರಂಭಿಸಿದೆ. 

ನೆರೆರಾಷ್ಟ್ರ ಪಾಕಿಸ್ತಾನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್, ಚಂದ್ರಯಾನ-2 ಹಿನ್ನಡೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕಿಚಾಯಿಸಿದ್ದಾರೆ. 

ಯಾವ ಕೆಲಸ ಬರುವುದಿಲ್ಲವೋ ಅದನ್ನು ಮಾಡುವ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದಿರುವ ಪಾಕಿಸ್ತಾನದ ಸಚಿವ ಇಂಡಿಯಾ ಬದಲಿಗೆ ಡಿಯರ್ ಎಂಡಿಯಾ ಎಂದು ಲೇವಡಿ ಮಾಡಿದ್ದಾರೆ. 

 ಇದರಂತೆ ಮತ್ತೊಂದು ಟ್ವೀಟ್ ನಲ್ಲಿ ಚಂದ್ರನಲ್ಲಿ ಇಳಿಯಬೇಕಿದ್ದ ಆಟಿಕೆ ಮುಂಬೈ ಮೇಲೆ ಬಿದ್ದಿದೆ. ರೂ.900 ಕೋಟಿ ವ್ಯರ್ಥವಾಗಿ ಹೋಗಿದೆ. ಭಾರತದ ಪ್ರಧಾನಿ ರಾಜಕಾರಣಿಯಲ್ಲ, ಗಗನಯಾನಿ ಎಂದು ವ್ಯಂಗ್ಯವಾಡಿದ್ದಾರೆ. 


ಪಾಕಿಸ್ತಾನದ ಈ ಮಹಾಶಯನ ಹುಚ್ಚಾಟಕ್ಕೆ ಇದೀಗ ಭಾರತೀಯ ನೆಟ್ಟಿಗರು ಭರ್ಜರಿಯಾಗಿಯೇ ತಿರುಗೇಟು ನೀಡಿತ್ತಿದ್ದು, ಹುಸೇನ್ ಮಾತ್ರ ತನ್ನ ಉದ್ಧಟತನವನ್ನು ಮುಂದುವರೆಸಿದ್ದಾರೆ. 

SCROLL FOR NEXT