ಸಿಂಗಾಪುರ: ಕೊರೋನಾ ವೈರಸ್ ನಡುವೆ ಸ್ವ ನಿರ್ಬಂಧ ಆದೇಶವನ್ನು ಉಲ್ಲಂಘಿಸಿದ ಭಾರತೀಯನ ವಿರುದ್ಧ ಕೇಸು ದಾಖಲಾಗಿದೆ. ಪ್ರಕರಣ ಕೋರ್ಟ್ ಮೆಟ್ಟಲೇರಿದ್ದು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಬೇಕಾಗಿದೆ.
ಕಳೆದ ಫೆಬ್ರವರಿ 16ರಿಂದ 25ರವರೆಗೆ ಸ್ವ ನಿರ್ಬಂಧನದಲ್ಲಿ ಭಾರತೀಯ ಮೂಲದ ವ್ಯಕ್ತಿ 35 ವರ್ಷದ ವಾರ್ದಿರೆಡ್ಡಿ ನಾಗೇಶ್ವರ ರೆಡ್ಡಿ ಇರಬೇಕಾಗಿತ್ತು. ಆದರೆ ಅವರು ಫೆಬ್ರವರಿ 24ರಂದು ಮನೆಯಿಂದ ಹೊರಬಂದಿದ್ದರು. ಹೀಗೆ ನಿಯಮ ಉಲ್ಲಂಘಿಸಿದ ಆರೋಪ ಇವರ ಮೇಲಿದ್ದು, ನ್ಯಾಯಾಲಯದ ಮುಂದೆ ಇದೇ ತಿಂಗಳ 23ರಂದು ಹಾಜರಾಗಿ ತಪ್ಪೊಪ್ಪಿಕೊಳ್ಳುವ ಸಾಧ್ಯತೆಯಿದೆ. ನ್ಯಾಯಾಲಯ ಏನು ತೀರ್ಪು ನೀಡಲಿದೆ ಎಂಬುದನ್ನು ನೋಡಬೇಕಾಗಿದೆ.
ಇದೇ ಆರೋಪದ ಮೇಲೆ ಚೀನಾ ಪ್ರಜೆ 49 ವರ್ಷದ ಲಿಯು ಡುಫೆಂಗ್ ಆರೋಪಿಯಾಗಿದ್ದು ಈತನ ವಿಚಾರಣೆ ಮೇ 8ರಂದು ನಡೆಯಲಿದೆ. ಮತ್ತೊಬ್ಬ ಸಿಂಗಾಪುರ್ ಪ್ರಜೆ 32 ವರ್ಷದ ಫೂ ಚಿಂಗ್ ಗೌನ್ ಕೂಡ ಇದೇ ಆರೋಪ ಎದುರಿಸುತ್ತಿದ್ದಾರೆ.
ಸಿಂಗಾಪುರ್ ದಲ್ಲಿ ನಿನ್ನೆ 623 ಹೊಸ ಕೊರೋನಾ ಕೇಸುಗಳು ದಾಖಲಾಗಿದ್ದು ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5 ಸಾವಿರದ 50ಕ್ಕೇರಿದೆ. ವಿದೇಶಿ ಕೆಲಸಗಾರರಲ್ಲಿ ಕೊರೋನಾ ಹೆಚ್ಚಾಗಿ ಕಂಡುಬರುತ್ತಿದ್ದು, ಅವರಲ್ಲಿ ಭಾರತೀಯರು ಹಲವರಿದ್ದಾರೆ.