ವಿದೇಶ

ಎಸ್ ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತದ ಆಹ್ವಾನಕ್ಕೆ ಕಾಯುತ್ತಿದ್ದೇವೆ:  ಪಾಕಿಸ್ತಾನ ವಿದೇಶಾಂಗ ಸಚಿವ 

Sumana Upadhyaya

ಇಸ್ಲಾಮಾಬಾದ್: ಶಾಂಘೈ ಸಹಕಾರ ಸಂಘದ(ಎಸ್ ಸಿಒ) ಶೃಂಗಸಭೆಯಲ್ಲಿ ಭಾಗವಹಿಸಲು ಭಾರತದ ಆಹ್ವಾನಕ್ಕೆ ಕಾಯುತ್ತಿರುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ತಿಳಿಸಿದ್ದಾರೆ.ಭಾರತದ ಆಹ್ವಾನ ಬಂದ ನಂತರ ಪಾಕಿಸ್ತಾನ ಶೃಂಗಸಭೆಯಲ್ಲಿ ಭಾಗಿಯಾಗಲಿದೆಯೇ, ಇಲ್ಲವೇ ಎಂದು ನಿರ್ಧರಿಸಲಿದೆ ಎಂದರು.


ಮೊನ್ನೆ 16ರಂದು ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ರವೀಶ್ ಕುಮಾರ್, ಭಾರತ ಸರ್ಕಾರವು ಬೇರೆ ರಾಷ್ಟ್ರಗಳ ನಾಯಕರೊಂದಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೂ ಎಸ್ ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ಆಹ್ವಾನ ನೀಡಲಿದೆ ಎಂದಿದ್ದರು.


ಇದೇ ಮೊದಲ ಬಾರಿಗೆ ಭಾರತ ಶಾಂಘೈ ಸಹಕಾರ ಸಂಘದ ಮಂಡಳಿ ಮುಖ್ಯಸ್ಥರ ವಾರ್ಷಿಕ ಸಭೆಯನ್ನು ಈ ಬಾರಿ ಆಯೋಜಿಸುತ್ತಿದೆ. 


ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಪಾಕಿಸ್ತಾನದ ಜೊತೆಗಿನ ಸಂಬಂಧ ತೀವ್ರ ಹದಗೆಟ್ಟ ನಂತರ ಭಾರತ ಮತ್ತು ಪಾಕಿಸ್ತಾನದ ನಾಯಕರು ಈ ಶೃಂಗಸಭೆಯಲ್ಲಿ ಒಂದಾಗಬೇಕಿದೆ. ಚೀನಾ ನೇತೃತ್ವದ ಎಸ್ ಸಿಒಗೆ ಭಾರತ ಮತ್ತು ಪಾಕಿಸ್ತಾನಗಳು 2017ರಲ್ಲಿ ಪೂರ್ಣ ಪ್ರಮಾಣದ ಸದಸ್ಯರಾಗಿದ್ದರು. 


ಸಾಮಾನ್ಯವಾಗಿ ಈ ಶೃಂಗಸಭೆಗೆ ವಿದೇಶಿ ಸಚಿವರುಗಳು ಆಗಮಿಸಿದರೆ ಕೆಲ ದೇಶಗಳಿಂದ ಪ್ರಧಾನ ಮಂತ್ರಿಗಳು ಪ್ರತಿನಿಧಿಸುತ್ತಾರೆ.


ಎಸ್ ಸಿಒವನ್ನು 2001ರಲ್ಲಿ ಶಾಂಘೈಯಲ್ಲಿ ಸ್ಥಾಪಿಸಲಾಯಿತು, ರಷ್ಯಾ, ಚೀನಾ, ಕಜಕಿಸ್ತಾನ, ತಜಕಿಸ್ತಾನ, ಉಜ್ಬೇಕಿಸ್ತಾನ ಮತ್ತು ಝೆಕ್ ಗಣರಾಜ್ಯಗಳ ಅಧ್ಯಕ್ಷರುಗಳು ಇದನ್ನು ಸ್ಥಾಪಿಸಿದ್ದರು.

SCROLL FOR NEXT