ವಿದೇಶ

ಭೂತಾನ್, ಭಾರತ ಗಡಿ ಅತಿಕ್ರಮ ಪ್ರವೇಶದ ಮೂಲಕ ಚೀನಾ ಜಗತ್ತಿನ ತಾಳ್ಮೆ ಪರೀಕ್ಷಿಸುತ್ತಿದೆ: ಅಮೆರಿಕ ಎಚ್ಚರಿಕೆ

Srinivasamurthy VN

ವಾಷಿಂಗ್ಟನ್: ಭೂತಾನ್ ಮತ್ತು ಭಾರತದ ಗಡಿ ಪ್ರದೇಶಗಳನ್ನು ಅತಿಕ್ರಮ ಪ್ರವೇಶ ಮಾಡುವ ಮೂಲಕ ಚೀನಾ ಜಾಗತಿಕ ರಾಷ್ಟ್ರಗಳ ತಾಳೆಯನ್ನು ಪರೀಕ್ಷಿಸುತ್ತಿದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಅವರು ಮಾತನಾಡಿ, 'ಭೂತಾನ್‌ ಮೇಲಿನ ಹಕ್ಕು ಪ್ರತಿಪಾದನೆ, ಭಾರತದ ಭೌಗೋಳಿಕ ಪ್ರದೇಶದ ಮೇಲಿನ ಇತ್ತೀಚಿನ ಅತಿಕ್ರಮಣಗಳು ಚೀನಾದ ಉದ್ದೇಶ ಏನೆಂಬುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪಾಂಪಿಯೋ ಅವರು ಚೀನಾ ವಿರುದ್ಧ ನೇರವಾಗಿಯೇ ಕಟು ಶಬ್ಧಗಳನ್ನು ಬಳಸಿ ಚೀನಾದ ವಿಸ್ತಾರವಾದವನ್ನು ಟೀಕಿಸಿದರು.'ಈ ಕ್ರಮಗಳು ಚೀನಾದವರು ದಶಕಗಳಿಂದ, 1989ರಿಂದ ಈಚೆಗೆ, ಅದರಲ್ಲೂ ಕ್ಸಿ ಜಿನ್‌ಪಿಂಗ್ ಅಧಿಕಾರಕ್ಕೆ ಬಂದ ಬಳಿಕ ಜಗತ್ತಿಗೆ ನೀಡುತ್ತಿದ್ದ ಸಂಕೇತಗಳೊಂದಿಗೆ ತಾಳೆಯಾಗುತ್ತವೆ. ಚೀನಾವು ತನ್ನ ಶಕ್ತಿಯನ್ನು ವಿಸ್ತರಿಸುವ ಬಯಕೆ ಹೊಂದಿದೆ. ಅವರು ಚೀನಾದ ಗುಣಲಕ್ಷಣ ಹೊಂದಿರುವ ಸಮಾಜವಾದವನ್ನು ಜಗತ್ತಿನಾದ್ಯಂತ ವಿಸ್ತರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಭೂತಾನ್ ಮೇಲೆ ಹಕ್ಕು ಪ್ರತಿಪಾದಿಸುತ್ತಿದ್ದಾರೆ. ಭಾರತದ ಮೇಲೆ ಅತಿಕ್ರಮಣ ಎಸಗುತ್ತಿದ್ದಾರೆ. ಇವುಗಳೆಲ್ಲ ಅವರ ಉದ್ದೇಶ ಏನೆಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಅವರ ಬೆದರಿಕೆಗಳು ಮತ್ತು ಬೆದರಿಸುವಿಕೆಗೆ ನಾವು ಎದುರು ನಿಲ್ಲುತ್ತೇವೆಯೇ ಎಂದು ಅವರು ಜಗತ್ತನ್ನು ಪರಿಶೀಲಿಸುತ್ತಿದ್ದಾರೆ ಎಂದು ಪಾಂಪಿಯೊ ಹೇಳಿದ್ದಾರೆ.

ವಿಶ್ವ ಪರಿಸರ ಸೌಲಭ್ಯ ಮಂಡಳಿಯಲ್ಲಿ (ಜಿಇಎಫ್‌) ಚೀನಾವು ಇತ್ತೀಚೆಗೆ ಭೂತಾನ್‌ನ ಸಕ್ತೇಂಗ್ ವನ್ಯಜೀವಿ ಅಭಯಾರಣ್ಯದ ಮೇಲೆ ಹಕ್ಕು ಪ್ರತಿಪಾದಿಸಿತ್ತು. ಆ ಪ್ರದೇಶದಲ್ಲಿನ ಯೋಜನೆಗೆ ಧನ ಸಹಾಯ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಇತ್ತ ಇಂಡೋ-ಚೀನಾ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಹಲವೆಡೆ ಭಾರತ–ಚೀನಾ ಯೋಧರು ಮೇ 5ರಂದು ಮುಖಾಮುಖಿಯಾಗಿದ್ದರು. ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಜೂನ್ 15ರಂದು ಉಭಯ ದೇಶಗಳ ಸೇನಾಪಡೆಗಳ ನಡುವೆ ನಡೆದ ಸಂಘರ್ಷದಲ್ಲಿ ಭಾರತದ ಕರ್ನಲ್ ಶ್ರೇಣಿಯ ಅಧಿಕಾರಿ ಸೇರಿ 20 ಯೋಧರು ಹುತಾತ್ಮರಾಗಿದ್ದರು. ಇದು ಉಭಯ ದೇಶಗಳ ನಡುವಿನ ಶೀಥಲ ಸಮರಕ್ಕೆ ಕಾರಣವಾಗಿತ್ತು. ಭಾರತ ಕೂಡ ಚೀನಾ ವಿರುದ್ಧ ಕಿಡಿಕಾರಿ, ಚೀನಾ ಮೂಲದ ಆ್ಯಪ್ ಗಳನ್ನು ಭಾರತದಲ್ಲಿ ನಿಷೇಧಿಸಿತ್ತು.

SCROLL FOR NEXT